ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಈ ಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಜಿಲ್ಲಾ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ಗುರುವಾರ ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ವ್ಯಕ್ತಿಯಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಇಮೇಲ್ ಕರೆ ಬಂದಿತ್ತು. ತಕ್ಷಣ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ಜಿಲ್ಲಾ ಪೊಲೀಸ್ವತಿಯಿಂದ ಬಿಗಿಕ್ರಮ ಕೈಗೊಳ್ಳಲಾಗಿತ್ತು. ನಂತರ ಅದು ಹುಸಿ ಕರೆ ಎಂಬುದು ಗೊತ್ತಾಗಿತ್ತು. ಈಗ ಮತ್ತೆ ದಿನಾಂಕ 27ರ ಶನಿವಾರ ಮತ್ತು 29ರ ಸೋಮವಾರ ಬೆಳಗಿನ ಜಾವದಲ್ಲಿ ಮುಖ್ಯ ನ್ಯಾಯಾಧೀಶರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಮತ್ತೆ ಎರಡೂ ಕರೆಗೆ ಸಂಬಂಧಿಸಿದಂತೆ ಜಯನಗರ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಕಳೆದ 6 ದಿನಗಳಿಂದ ಜಿಲ್ಲಾ ನ್ಯಾಯಾಲಯ ಸಂಕಿರ್ಣದ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲಾ ದ್ವಾರಗಳಲ್ಲಿಯೂ ತಪಾಸಣಾ ತಂಡ ಸಾರ್ವಜನಿಕರನ್ನು ಮತ್ತು ನ್ಯಾಯಾಲಯಕ್ಕೆ ಬರುವ ಎಲ್ಲರನ್ನು ಪರಿಶೀಲನೆ ನಡೆಸಿ, ಒಳಗೆ ಬಿಡಲಾಗುತ್ತಿದೆ. ಇಂದೂ ಕೂಡ ತಪಾಸಣಾ ತಂಡದಿಂದ ನ್ಯಾಯಾಲಯದ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಬಾಂಬ್ ನಿಷ್ಕ್ರೀಯದಳ ಮತ್ತು ಶ್ವಾನದಳದಿಂದ ತಪಾಸಣೆ ನಡೆಸಲಾಯಿತು.

ರಾಜ್ಯದ ಹಲವು ಜಿಲ್ಲೆಗಳ ನ್ಯಾಯಾಲಯಕ್ಕೆ ಈ ರೀತಿಯ ಹುಸಿಬಾಂಬ್ ಕರೆ ಬರುತ್ತಿದ್ದು, ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ