ಶಿವಮೊಗ್ಗ ನ.27, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಪಕ್ಷಗಾರರಿಗೆ ತ್ವರಿತ ನ್ಯಾಯದಾನ ನೀಡುವ ಉದ್ದೇಶದಿಂದ ಡಿ.13 ರಂದು ಈ ವರ್ಷದ ಕೊನೆಯ ಲೋಕ್ ಅದಾಲತ್ನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಗುರುವಾರ ಲೋಕ್ ಅದಾಲತ್ ಹಾಗೂ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ಮತ್ತು ಸಾರಿಗೆ ಇಲಾಖೆಯ ದಂಡ ಪಾವತಿ ಬಾಕಿ ಪ್ರಕರಣಗಳಿಗೆ ಶೇ.50 ರಿಯಾಯಿತಿ ನೀಡಿ ಪ್ರಕರಣ ಇತ್ಯರ್ಥಪಡಿಸುವ ಸಂಬಂಧ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಡಿ.13 ರಂದು ನಡೆಯುವ ಲೋಕ್ ಅದಾಲತ್ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ವಿವಾಹದ ವ್ಯಾಜ್ಯಗಳು, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ವಿವಾದದ ದಾವೆಗಳು, ವೇತನ ಮತ್ತು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವೇದಿಕೆಯ ಪ್ರಕರಣಗಳು, ಸಾಲದ ಪ್ರಕರಣಗಳು, ಪಾಲು ವಿಭಾಗದ ದಾವೆಗಳು, ಸ್ಥಿರ ಆಸ್ತಿ ಸ್ವಾಧೀನದ ದಾವೆಗಳು, ಭೂಸ್ವಾಧೀನದ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕಾಗಿ ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸುವರು. ಅಂದರಂತೆ ಅಂತಿಮ ಆದೇಶವನ್ನು ಅದೇ ದಿನದಂದು ನೀಡಲಾಗುವುದು. ಸಾರ್ವಜನಿಕರು ಮತ್ತು ಪಕ್ಷಗಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ದಿನಾಂಕ: 13.09.2025 ರಂದು ಕೈಗೊಳ್ಳಲಾದ ಈ ವರ್ಷದ 3 ನೇ ರಾಷ್ಟ್ರೀಯ ಲೋಕ್ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 14550 ರಷ್ಟು ಪ್ರಕರಣಗಳು ರಾಜೀ ಸಂಧಾನದ ಮೂಲಕ ಕೊನೆಗೊಂಡಿದ್ದು, ಅವುಗಳ ಮೂಲಕ ಪಕ್ಷಗಾರರು ಒಟ್ಟು ರೂ. 36,49,86,652/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ. ಅದೇ ಸಂದರ್ಭದಲ್ಲಿ ಒಟ್ಟು 1,46,464 ವ್ಯಾಜ್ಯ ಪೂರ್ವ ಪ್ರಕರಣಗಳು ಕೊನೆಗೊಂಡಿದ್ದು, ಅವುಗಳ ಮೂಲಕ ಒಟ್ಟು ರೂ. 46,95,49,044/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ಹಾಗೂ 1990-91 ರಿಂದ 2019-20 ರೊಳಗೆ ಆರ್ಟಿಓ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ದಂಡ ಪಾವತಿಸಲು ಶೇ.50 ರಷ್ಟು ರಿಯಾಯಿತಿಯನ್ನು ನೀಡಿದ್ದು ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಂಡು ಕೂಡಲೇ ದಂಡ ಪಾವತಿಸಬೇಕು. ಮತ್ತೊಂದು ಅವಕಾಶಕ್ಕಾಗಿ ಕಾಯಬಾರದು.
ಜಿಲ್ಲೆಯಲ್ಲಿ ಯಾವುದೇ ಆನ್ಲೈನ್ ಪಾವತಿ ವ್ಯವಸ್ಥೆ ಇರುವುದಿಲ್ಲ. ಯಾವುದಾದರೂ ಫೇಕ್ ಲಿಂಕ್ಗಳು ಬಂದಲ್ಲಿ ಜನರು ಅದಕ್ಕೆ ಬಲಿಯಾಗಬಾರದು. ಹಾಗೂ ವಾಹನ ಸಂಚಾರದ ವೇಳೆ ಎಲ್ಲರೂ ವಿಶೇಷವಾಗಿ ಯುವಜನತೆ ಹೆಲ್ಮೆಟ್ನ್ನು ಕಡ್ಡಾಯವಾಗಿ ಧರಿಸಬೇಕು.
-ಸಂತೋಷ್ ಎಂ ಎಸ್ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾ
ವೃತ್ತ ನಿರೀಕ್ಷಕರಾದ ದೇವರಾಜ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಶೇ.50 ರಿಯಾಯಿತಿಯಲ್ಲಿ ಪಾವತಿಸಬಹುದಾಗಿದೆ.
2023 ರ ಆಗಸ್ಟ್ ನಿಂದ 2025 ರ ನವೆಂಬರ್ವರೆಗೆ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನಿಂದ ಒಟ್ಟು 3,10,560 ಇ-ಚಲನ್ ಪ್ರಕರಣಗಳನ್ನು ದಾಖಲಿಸಿದ್ದು, ರೂ.22,77,61,750 ದಂಡ ವಿಧಿಸಲಾಗಿದೆ. ಈವರೆಗೆ 1,10,052 ಇ-ಚಲನ್ ಮುಕ್ತಾಯಗೊಂಡಿದ್ದು ರೂ.6,43,70,500 ದಂಡ ವಸೂಲಾಗಿದೆ. 2,00,508 ಇ-ಚಲನ್ ಪ್ರಕಣ ಬಾಕಿ ಇದ್ದು ಒಟ್ಟು ರೂ.16,33,91,250 ದಂಡ ವಸೂಲಾತಿಗೆ ಬಾಕಿ ಎಂದು ಮಾಹಿತಿ ನೀಡಿದರು.
ಕಳೆದ ಬಾರಿ ದಿ: 23-08-2025 ರಿಂದ 12-09-2025 ರವರೆಗೆ ನೀಡಲಾಗಿದ್ದ ಶೇ.50 ರಷ್ಟು ರಿಯಾಯಿತಿಯಲ್ಲಿ ಸಾರ್ವಜನಿಕರು ಒಟ್ಟು 50,451 ಪ್ರಕರಣ ಇತ್ಯರ್ಥಪಡಿಸಿದ್ದು ರೂ.2,09,41,750 ದಂಡ ಹಣವನ್ನು ಪಾವತಿಸಿದ್ದಾರೆ ಎಂದರು.
ಇ-ಚಲನ್ ದಂಡವನ್ನು ಪಾವತಿಸಲು ಆನ್ಲೈನ್ ವ್ಯವಸ್ಥೆ ಇರುವುದಿಲ್ಲ. ಪೂರ್ವ ಸಂಚಾರ, ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳಲ್ಲಿ ಪಾವತಿಸಲು ಅವಕಾಶ ಇದೆ. ಹಾಗೂ ಭದ್ರಾವತಿ ಸಂಚಾರ ಪೊಲೀಸ್ ಠಾಣೆ, ಅಶೋಕ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್, ಪೊಲೀಸ್ ಚೌಕಿ ಸರ್ಕಲ್ಗಳಲ್ಲಿ ಇರುವ ಪೊಲೀಸ್ ಕಿಯಾಸ್ಕ್ಗಳಲ್ಲಿ ಹಾಗೂ ಕರ್ತವ್ಯನಿರತ ಶಿವಮೊಗ್ಗ ಸಂಚಾರ ಠಾಣೆಯ ಇ-ಚಲನ್ ಮಷೀನ್ ಹೊಂದಿರುವ ಎಎಸ್ಐ ಮತ್ತು ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದಾಗಿದ್ದು ಸಾರ್ವಜನಿಕರು ಈ ಸದುಪಯೋ ಪಡೆಯಬೇಕು ಎಂದರು.
ಆರ್ಟಿಓ ಮುರುಗೇಂದ್ರ ಬಿ ಶಿರೋಲ್ಕರ್ ಮಾತನಾಡಿ, ಸರ್ಕಾರವು ಮೊದಲ ಬಾರಿಗೆ ಸಾರಿಗೆ ಇಲಾಖೆಯಲ್ಲಿ ಸಂಚಾಯ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇ.50 ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಿದ್ದು, 1990-91 ರಿಂದ 2019-20 ರೊಳಿಗೆ ಆರ್ಟಿಓ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ಶೇ.50 ರಷ್ಟು ದಂಡ ಪಾವತಿ ರಿಯಾಯಿತಿಯ ಅವಕಾಶ ಬಳಸಿಕೊಂಡು ದಂಡ ಪಾವತಿಸಬೇಕು. ಶಿವಮೊಗ್ಗ ಆರ್ಟಿಓ ಅಡಿ 790, ಸಾಗರ ಎಆರ್ಟಿಓ 523 ಪ್ರಕರಣಗಳಲ್ಲಿ ದಂಡ ಬಾಕಿ ಇದ್ದು ಸಂಬAಧಪಟ್ಟ ವಾಹನ ಮಾಲೀಕರು ಡಿ.12 ರೊಳಗೆ ಈ ಅವಕಾಶ ಬಳಸಿಕೊಂಡು ದಂಡ ಪಾವತಿ ಪ್ರಕರಣ ಮುಕ್ತಾಯಗೊಳಿಸಬೇಕೆಂದು ಕೋರಿದರು.