ಶಿವಮೊಗ್ಗ : ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಸಹ ಇದೂವರೆಗೆ ಕೃತಕ ರಕ್ತ ಉತ್ಪಾದನೆ ಮಾಡಲಾಗಿಲ್ಲ. ಒಬ್ಬ ರಕ್ತದಾನ ಮಾಡುವುದರಿಂದ ನಾಲ್ವರ ಜೀವ ಉಳಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಹೇಳಿದ್ದಾರೆ.
ಅವರು ಇಂದು ರೋಟರಿ ರಕ್ತನಿಧಿ ಕೇಂದ್ರದಲ್ಲಿ ಬಿಜೆಪಿ ಯುವಮೋರ್ಚಾ ಶಿವಮೊಗ್ಗ ವತಿಯಿಂದ ಪ್ರಧಾನಿ ನರೇಂದ್ರಮೋದಿಯವರ ೭೫ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾಪಾಕ್ಷಿಕದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಎನ್ನ ಕಾಲೇ ಕಂಬ-ದೇಹವೇ ದೇಗುಲ’ ಎಂದಾದ ಮೇಲೆ ದೇಹದ ಹೃದಯ ದೀಪಕ್ಕೆ ರಕ್ತ ಅತೀ ಮುಖ್ಯವಾದದ್ದು. ಅದು ಜೀವನದಿ, ರಕ್ತದಾನದಿಂದ ದೇಹ ಹಗುರವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಕೊಟ್ಟದ್ದು ಕೆಟ್ಟಿತೆನಬೇಡ ಎಂಬಂತೆ ರಕ್ತಕೊಟ್ಟು ಕೇವಲ ಒಂದೂವರೆ ಗಂಟೆಯೊಳಗೆ ಮತ್ತೆ ಉತ್ಪಾದನೆಯಾಗುತ್ತದೆ. ರಕ್ತದಾನದಿಂದ ಹೃದಯಾಘಾತ ಕಡಿಮೆಯಾಗುತ್ತದೆ. ಕ್ಯಾನ್ಸರ್ ಕೂಡ ಬರುವುದಿಲ್ಲ

ನಿಸ್ವಾರ್ಥಸೇವೆಯಿಂದ ಲಭಿಸಿದ ಆತ್ಮತೃಪ್ತಿ ರಕ್ತದಾನದಿಂದ ಸಿಗುತ್ತದೆ. ಪ್ರಪಂಚದಲ್ಲಿ ಒಂದು ನಿಮಿಷಕ್ಕೆ ೧೨೦೦ ಬಾಟಲಿ ರಕ್ತದ ಅವಶ್ಯಕತೆ ಇದ್ದು, ಭಾರತದಲ್ಲಿ ಒಂದು ನಿಮಿಷಕ್ಕೆ ೧೦೦ ಯೂನಿಟ್ ರಕ್ತದ ಅಗತ್ಯವಿದೆ. ಪ್ರತಿನಿಮಿಷಕ್ಕೆ ರಕ್ತ ಸಿಗದೆ ೧೨ ಜನರು ಸಾಯುತ್ತಾರೆ. ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲಾಗುವುದಿಲ್ಲ ಎಂದರು.

ಶಾಸಕ ಡಿ.ಎಸ್. ಅರುಣ್ ಮಾತನಾಡಿ, ಯುವಕರು ಹೆಚ್ಚಿನ ರಕ್ತದಾನ ಮಾಡೋಣ. ಹವಾಮಾನ ವೈಪರಿತ್ಯದಿಂದಾಗಿ ಮಲೆನಾಡಿನಲ್ಲಿ ಅನೇಕ ಖಾಯಿಲೆಗಳು ಬರುತ್ತಿವೆ. ರಕ್ತದ ತುರ್ತು ಅಗತ್ಯವಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ನೆರವಾಗೋಣ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ರಾಹುಲ್ಬಿದಿರೆ, ಪ್ರಮುಖರಾದ ದರ್ಶನ್, ನಾಗರಾಜ್, ಮೋಹನ್ರೆಡ್ಡಿ, ಮಂಜುನಾಥ್, ಅಭಿ, ಮೊದಲಾದವರಿದ್ದರು.