ನಗರದ ದುರ್ಗಿಗುಡಿ ಬಡಾವಣೆಯಲ್ಲಿ ಪ್ರತಿನಿತ್ಯ ಪಾಲಿಕೆ ಕಸಸಂಗ್ರಹ ವಾಹನ ಕಾರ್ಯ ನಿರ್ವಹಿಸುತ್ತಿದ್ದರೂ ಕೆಲವು ಸಾರ್ವಜನಿಕರು ರಸ್ತೆ ಬದಿಗಳಲ್ಲಿ ರಾತ್ರಿ ಹೊತ್ತು ಕಸ ಸುರಿದು ಸಮಸ್ಯೆ ಉಂಟುಮಾಡುತ್ತಿದ್ದರು. ಮುಖ್ಯವಾಗಿ ದುರ್ಗಿಗುಡಿ ಶಾಲೆ ಎದುರಲ್ಲಿ ಪಾಲಿಕೆ ಸಿಬ್ಬಂದಿಗಳು ಪ್ರತಿನಿತ್ಯ ಸ್ವಚ್ಛ ಮಾಡುತ್ತಿದ್ದರೂ ಕಸದ ರಾಶಿಯ ಅವಾಂತರ ನಿಂತಿರಲಿಲ್ಲ.

ಈ ಸಮಸ್ಯಗೆ ಶಿವಮೊಗ್ಗ ಮಹಾ ನಗರ ಪಾಲಿಕೆ ಹೊಸ ತಂತ್ರ ಕಂಡುಕೊಂಡಿದೆ! ಇಂತಹ ಸ್ಥಳಗಳನ್ನು ಪೂರ್ಣ ಸ್ವಚ್ಛಗೊಳಿಸಿ ಆ ಜಾಗದಲ್ಲಿ ಪಾಲಿಕೆ ಮಹಿಳಾ ಸಿಬ್ಬಂದಿಗಳಿಂದ ಅಂದವಾದ ರಂಗೋಲಿ ಹಾಕಿಸಿ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.

ಪಾಲಿಕೆಯ ಶ್ರಮದ ಜೊತೆಗೆ ಗಾಂಧಿಮಾರ್ಗ ಜನಜಾಗೃತಿ ಕಾರ್ಯಕ್ಕೆ ಪ್ರಜ್ಞಾವಂತ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ, ಸ್ವಸ್ಥ, ಸುಂದರ , ಸುಸಂಸ್ಕೃತ ಶಿವಮೊಗ್ಗ ನಗರದ ನಿರ್ಮಾಣ ಕಾರ್ಯದಲ್ಲಿ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ವಸಂತ್ , ಪಾಲಿಕೆ ಸ್ವಚ್ಛತಾ ಸಿಬ್ಬಂದಿಗಳು, ಜಿಲ್ಲಾ ಪರ್ಯಾವರಣ ಗತಿವಿಧಿಯ ತ್ಯಾಗರಾಜ ಮಿತ್ಯಾಂತ ಮುಂತಾದವರು ಉಪಸ್ಥಿತರಿದ್ದರು.