ಶಿವಮೊಗ್ಗ,ಜು.೯: ಶ್ರೀಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘದ ವತಿಯಿಂದ ಜು.೨೭ರಂದು ಜೆ.ಎಚ್.ಬಡಾವಣೆಯಲ್ಲಿರುವ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘವು ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ. ಈ ಬಾರಿಯೂ ಕೂಡ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.೭೫ಕ್ಕೂ ಹೆಚ್ಚು ಅಂಕ ಪಡೆದ ನಗರ ಮಟ್ಟದ ಮತ್ತು ಸದಸ್ಯರ ಮಕ್ಕಳು ಅರ್ಜಿ ಹಾಕಲು ಅರ್ಹರಾಗಿರುತ್ತಾರೆ. ಇವರು ಜು.೨೦ರೊಳಗೆ ತಮ್ಮ ಅರ್ಜಿಗಳನ್ನು ಸಮಾಜದ ಕಛೇರಿಗೆ ತಲುಪಿಸಬೇಕು ಎಂದರು.
ಹಾಗೆಯೇ ಸಾಧನೆ ಮಾಡಿದವರನ್ನು ಕೂಡ ಸನ್ಮಾನಿಸಲಾಗುವುದು. ನಾವು ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಕೂಡ ಸನ್ಮಾನಿಸುತ್ತಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸ್ವಾಮೀಜಿಗಳು, ಗಣ್ಯರು ಆಗಮಿಸುತ್ತಾರೆ ಎಂದರು.

ಸಂಘದ ಗೌರವ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ನಮ್ಮ ಸಂಘವು ಹಲವು ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ಗಾಡಿಕೊಪ್ಪದ ಬಳಿ ಸುಮಾರು ೩ ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಶಾಲೆಯನ್ನು ನಿರ್ಮಿಸಲಾಗುವುದು. ಇದು ವಸತಿ ಶಾಲೆಯೂ ಆಗುತ್ತದೆ. ಜುಲೈನಲ್ಲಿ ಶಂಕು ಸ್ಥಾಪನೆ ಇದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಆರಂಭಗೊಳ್ಳುತ್ತದೆ ಎಂದರು.

ಕಾರ್ಯಕ್ರಮದ ದಿನವೇ ಸದಸ್ಯತ್ವವನ್ನು ನವೀಕರಣ ಮಾಡಲಾಗುವುದು. ಈಗಾಗಲೇ ೧೦೦ ರೂ. ಕೊಟ್ಟು ಸದಸ್ಯರಾದವರು ಮತ್ತೇ ೧೦೦ ರೂ. ಕೊಟ್ಟು ನವೀಕರಣ ಮಾಡಬೇಕಾಗುತ್ತದೆ. ಹೊಸದಾಗಿ ನವೀಕರಣ ಮಾಡುವವರು ೨೦೦ ರೂ.ಗಳನ್ನು ಪಾವತಿ ಮಾಡಿ ಸದಸ್ಯತ್ವ ಪಡೆಯಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಎಚ್.ಶಾಂತ ಆನಂದ್, ಪದಾಧಿಕಾರಿಗಳಾದ ಕೆ.ಎಸ್.ತಾರಾನಾಥ್, ಬಳ್ಳಕೆರೆ ಸಂತೋಷ್, ಡಾ.ಸಿ.ರೇಣುಕಾರಾಧ್ಯ, ಮಹಾಲಿಂಗಯ್ಯಶಾಸ್ತ್ರಿ ಎಸ್.ಎನ್., ಮೋಹನ್ಕುಮಾರ್, ಟಿ.ಬಿ.ಜಗದೀಶ್, ಪಿ.ರುದ್ರೇಶ್, ಎಂ.ಆರ್. ಪ್ರಕಾಶ್, ಸಿ.ಮಹೇಶ್ಮೂರ್ತಿ, ಜೆ.ಆರ್.ಮಂಜುನಾಥ್, ಚನ್ನಬಸಪ್ಪ, ಹಾಲನಗೌಡರು ಸೇರಿದಂತೆ ಹಲವರಿದ್ದರು.