
ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಐತಿಹಾಸಿಕ ಲಾಭ ಗಳಿಸಿದ್ದು, 2024-25ಕ್ಕೆ 18.24 ಕೋಟಿ ರೂ. ನಿವ್ವಳ ಲಾಭ ಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ಇತಿಹಾಸದಲ್ಲಿಯೇ ಇದು ಅತ್ಯಂತ ಹೆಚ್ಚು ಲಾಭ ಗಳಿಸಿದ ವರ್ಷವಾಗಿದೆ. ಒಟ್ಟು 46 ಕೋಟಿ ರೂ. ಲಾಭ ಬಂದಿದೆ. ಅದರಲ್ಲಿ 18.24 ಕೋಟಿ ರೂ. ನಿವ್ವಳ ಲಾಭವಾಗಿದೆ. ಸುಮಾರು 3464.50 ಕೋಟಿ ರೂ. ವ್ಯವಹಾರವನ್ನು ಬ್ಯಾಂಕ್ ಮಾಡಿದೆ. 1690.17 ಕೋಟಿ ರೂ. ಠೇವಣಿ ಇದ್ದು, 150.60 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 75.95 ಕೋಟಿ ನಿಧಿಗಳಿದ್ದು, 2582.86 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಅಂಕಿ ಅಂಶ ನೀಡಿದರು.

ಡಿಸಿಸಿ ಬ್ಯಾಂಕ್ ರೈತರ ಹಿತಕ್ಕಾಗಿಯೇ ಕೆಲಸ ಮಾಡುತ್ತಾ ಬಂದಿದ್ದು, ನಬಾರ್ಡ್ನ ಪುನರ್ ಧನ ಸೌಲಭ್ಯ ಕಡಿತದ ನಡುವೆಯೂ ಕೂಡ ಪ್ರಸಕ್ತ ಸಾಲಿನಲ್ಲಿ 1,08,500 ರೈತರಿಗೆ 1206.60 ಕೋಟಿ ರೂ. ಕೃಷಿ ಬೆಳೆ ಸಾಲ ನೀಡಲಾಗಿದೆ. ಮಧ್ಯಮಾವಧಿ ಕೃಷಿ ಸಾಲವನ್ನು 532 ರೈತರಿಗೆ 80 ಕೋಟಿ ರೂ. ಸಾಲ ನೀಡಲಾಗಿದೆ. ಸಾಲದ ವಸೂಲಾತಿಯೂ ಕೂಡ ಶೇ. 99.60ರಷ್ಟಿದೆ ಎಂದ ಅವರು, ಸ್ವಸಹಾಯ ಸಂಘಗಳಿಗೂ ಕೂಡ ಸಾಲ ನೀಡಲಾಗಿದೆ. 8500 ಸ್ವಸಹಾಯ ಸಂಘಗಳ ಪೈಕಿ 3255 ಸಂಘಗಳಿಗೆ 140.82 ಕೋಟಿ ರೂ. ಸಾಲ ನೀಡಲಾಗಿದೆ. ಹಾಗೆಯೇ ಸುಮಾರು 15824 ವ್ಯಕ್ತಿಗಳಿಗೆ ಕೃಷಿಯೇತರ ಸಾಲವಾಗಿ 545.26 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಬ್ಯಾಂಕ್ ಈಗಾಗಲೇ ಜಿಲ್ಲೆಯಲ್ಲಿ ಹಲವು ನೂತನ ಶಾಖೆಗಳನ್ನು ತೆರೆಯುತ್ತಿದ್ದು, ಹೊಸದಾಗಿ ಗಾಜನೂರು, ಬಾರಂದೂರು, ತೀರ್ಥಹಳ್ಳಿ, ತ್ಯಾಗರ್ತಿ ಮತ್ತು ನಗರ ಗ್ರಾಮಗಳಲ್ಲಿ ಹೊಸ ಐದು ಶಾಖೆಗಳನ್ನು ತೆರೆಯಲಾಗುವುದು. ಇದರ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ 2025-26ನೇ ಸಾಲಿಗೆ 14 ಹೊಸ ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಆರ್.ಬಿ.ಐ. ಕೂಡ ಅನುಮತಿ ನೀಡಿದೆ. ಶೀಘ್ರದಲ್ಲೇ ಬ್ಯಾಂಕ್ ನೂತನ ಶಾಖೆಗಳ ಕಾರ್ಯ ಆರಂಭಿಸಲಾಗುವುದು ಎಂದರು.
ಕೃಷಿ ಹಾಗೂ ಕೃಷಿಯೇತರ ಸಾಲಗಳ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಸಾಲ ಪಡೆದ ರೈತರು 700 ರೂ. ಕಂತನ್ನು ನೀಡಿ ವಿಮಾ ಸೌಲಭ್ಯಕ್ಕೆ ಒಳಪಡಬಹುದು. ಹಾಗೆಯೇ ವಿಶೇಷ ಠೇವಣಿ ಯೋಜನೆಯನ್ನು 2025ರ ಜೂನ್ ವರೆಗೆ ಮುಂದುವರೆಸಿದ್ದು, ಇದರ ಪ್ರಯೋಜನವನ್ನು ಕೂಡ ಗ್ರಾಹಕರು ಪಡೆಯಬಹುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸುಮಾರು 13 ಲಕ್ಷ ರೈತರಿಗೆ 1300 ಕೋಟಿ ರೂ. ಸಾಲ ನೀಡುವ ಉದ್ದೇಶವಿದೆ. ಶೇ. 3ರ ಬಡ್ಡಿದರದಲ್ಲಿ ಸಾವಿರ ರೈತರಿಗೆ 100 ಕೋಟಿ ರೂ. ಮಧ್ಯಮಾವಧಿ ಸಾಲ ಹಂಚಿಕೆ ಮಾಡಲಾಗುವುದು ಎರಡೂವರೆ ಸಾವಿರ ಸ್ವಸಹಾಯ ಸಂಘಗಳಿಗೆ 100 ಕೋಟಿ ರೂ. ಸಾಲ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 2 ಸಾವಿರ ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದು, ಬ್ಯಾಂಕಿಗೆ 73 ವರ್ಷ ಆಗಿದ್ದು, 75ನೇ ಅಮೃತ ವರ್ಷದ ಮಹೋತ್ಸವದ ಹೊತ್ತಿಗೆ ಸುಮಾರು 60 ಕೋಟಿ ಲಾಭ ಗಳಿಸುವತ್ತ ಬ್ಯಾಂಕ್ ಸಾಗುತ್ತಿದೆ ಎಂದರು.

ಕಲ್ಮನೆ ಸೊಸೈಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸರಿ ಮಾಡಲು ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇವೆ. ಠೇವಣಿ ಇಟ್ಟವರಿಗೆ ಭರವಸೆ ಕೊಟ್ಟಿದ್ದೇವೆ. ಗ್ರಾಹಕರಿಗೂ ಕೂಡ ಈಗ ನಂಬಿಕೆ ಬಂದಿದೆ. ಯಾವ ತೊಂದರೆಯೂ ಇಲ್ಲ ಎಂದರು.
ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿದ ಅವರು, ಕಾಲ ಕಾಲಕ್ಕೆ ತಕ್ಕಂತೆ ಹಾಲಿನ ದರ ಏರುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನು ಬಿಜೆಪಿಯವರು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಒಂದು ಲೀಟರ್ ನೀರಿಗೆ 50 ರೂ. ಕೊಡುವ ಈ ಹೊತ್ತಿನಲ್ಲಿ ಒಂದು ಲೀಟರ್ ಹಾಲಿಗೆ ಇಷ್ಟು ದರ ಕೊಡಬಾರದೇ? ಇದು ಹೇಗೆ ಹೆಚ್ಚಳವಾಗುತ್ತದೆ. ಎಲ್ಲವೂ ರೈತರ ಹಿತಕ್ಕಾಗಿಯೇ ಎಂದರು.

ಸಕ್ಕರೆ ಕಾರ್ಖಾನೆಗೆ ಶೇ. 13ರ ಬಡ್ಡಿ ದರದಲ್ಲಿ ಸಾಲ ಕೊಟ್ಟಿದ್ದರಿಂದ ಬ್ಯಾಂಕ್ ಗೆ ಹೆಚ್ಚು ಲಾಭವಾಗಿದೆ. ಹಾಗೆಯೇ ಸುರಕ್ಷಾ ಗೋದಾಮಿಗೆ ನೀಡಿದ ಸಾಲದ ಬಾಬ್ತು ಈಗಾಗಲೇ 36 ಕೋಟಿ ಹರಾಜಿನ ಮೂಲಕ ಬಂದಿದ್ದು, ಇನ್ನು 9 ಕೋಟಿ ರೂ. ಮಾತ್ರ ಬರಬೇಕಾಗಿದೆ. ಅದು ಕೂಡ ಈ ವರ್ಷವೇ ವಸೂಲಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ದುಗ್ಗಪ್ಪಗೌಡ, ದಶರಥಗಿರಿ, ಸುಧೀರ್, ಪರಮೇಶ್, ಹನುಮಂತ, ಶಿವಶಂಕರ್, ಬಸವರಾಜ್, ರುದ್ರೇಗೌಡ, ಚಂದ್ರೇಡ, ಸಿಇಒ ಅನ್ನಪೂರ್ಣ ಇದ್ದರು.