ಶಿಕಾರಿಪುರ: ತಾಲ್ಲೂಕಿನ ಮದಗಹಾರನಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಸಂಗ್ರಹಿಸಿಟ್ಟಿದ ಬೋನಿನಲ್ಲಿ ಬುಧವಾರ ಮುಂಜಾನೆ ಚಿರತೆ ಸೆರೆ ಸಿಕ್ಕಿದೆ.

ಗ್ರಾಮದ ಸುತ್ತಲೂ ಚಿರತೆ ಓಡಾಡುತ್ತಿದೆ ಎಂಬ ಮಾಹಿತಿಯನ್ನು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರು.
ಗ್ರಾಮಸ್ಥರ ಮಾಹಿತಿ ಆಧಾರದ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಗೋಪ್ಯಾನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಚಿರತೆ ಚಲನವಲನ ಗಮನಿಸಿ ಎರಡು ದಿನಗಳ ಹಿಂದೆ ಗ್ರಾಮ ಸಮೀಪವೇ ನಾಯಿ ಸಮೇತ ಬೋನನ್ನು ಇಟ್ಟಿದ್ದರು. ಬುಧವಾರ ಮುಂಜಾನೆ ಚಿರತೆ ಬೋನಿನಲ್ಲಿ ಸೆರೆಸಿಕ್ಕಿದೆ.

ಸುಮಾರು 3 ವರ್ಷದ ಗಂಡು ಚಿರತೆಯಾಗಿದ್ದು, ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯಣ್ಣ ಭೇಟಿ ನೀಡಿ ತಪಾಸಣೆ ನಡೆಸಿ ಚಿರತೆ ಆರೋಗ್ಯಕರವಾಗಿದ್ದನ್ನು ತಿಳಿಸಿದ್ದಾರೆ. ಸೆರೆಸಿಕ್ಕ ಚಿರತೆಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದ ದೃಶ್ಯ ಕಂಡು ಬಂದಿತು.