ಬೆಂಗಳೂರು:
ವಿಧಾನಸಭೆ ಕಲಾಪದ ವೇಳೆ ಒಂದು ದೇಶ, ಒಂದು ಚುನಾವಣೆ ವಿಚಾರದ ಚರ್ಚೆಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಈಗಷ್ಟೆ ಒಂದು ವಾರದ ಅವಧಿಗೆ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕರ ವರ್ತನೆಗೆ ಕೆಂಡಾಮಂಡಲರಾದ ಸ್ಪೀಕರ್ ಕಾಗೇರಿ ಸದನದಿಂದ ಹೊರಹಾಕುವುದಾಗಿ ಎಚ್ಚರಿಸಿದ್ದರಲ್ಲದೇ, ಇಂತಹ ವರ್ತನೆ ಕ್ಷೇತ್ರದ ಜನತೆಗೆ ತೋರುವ ಅಗೌರವ ಎಂದು ಕಿಡಿಕಾರಿದ್ದರು. ಈ ಸಂದರ್ಭದಲ್ಲಿ ಸಂಗಮೇಶ್ ಶರ್ಟ್ ಹಾಕಿಕೊಂಡರು.
ಇದರ ಬೆನ್ನಲ್ಲೇ ಇದೀಗ ಕಲಾಪದಲ್ಲಿ ಅಶಿಸ್ತಿನಿಂದ ನಡೆದುಕೊಂಡ ಶಾಸಕ ಸಂಗಮೇಶ್ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಿದ್ದು, 1 ವಾರ ಕಾಲ ಸದನದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

