ಶಿವಮೊಗ್ಗ,ಏ.೦೫: ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ನನಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ ನೀಡುವುದರೊಂದಿಗೆ ತಮ್ಮ ಬಂಧುಮಿತ್ರರ ಮತವನ್ನು ಕೊಡಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿಕೊಂಡರು.
ದೈವಜ್ಞ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ನಗರ ಜೆಡಿಎಸ್ ಸಮಿತಿ ಹಮ್ಮಿಕೊಂಡಿದ್ದ ಪಕ್ಷದ ಬೂತ್ ಹಾಗೂ ವಾರ್ಡ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದೆಯೂ ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಕಾರಣಾಂತರಗಳಿಂದ ಅದು ಮುರಿದು ಬಿದ್ದಿತ್ತು. ಈಗ ದೇಶದ ಹಿತ ದೃಷ್ಟಿಯಿಂದ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರು ಒಂದು ಮಾಡಿದ್ದಾರೆ. ತಾಯಂದಿರ, ಬಡವರ, ಯುವಕರ, ದಲಿತರ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ ಯಾಚಿಸೋಣ ಎಂದರು.
ದೇಶದಲ್ಲಿ ೩ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದ್ದು ಚುನಾವಣೆಯ ನಂತರ ಬದಲಾವಣೆ ನೋಡಲಿದ್ದೇವೆ. ಏ.೧೮ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದ ಅವರ ಏ.೧೪ರಂದು ಸಂಜೆ ೪ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಕ್ಷೇತ್ರದ ಮತದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆಗೆ ಠೇವಣಿಯಾಗಿ ೨೫ ಸಾವಿರ ರೂ. ಸಲ್ಲಿಸಬೇಕಾಗಿದೆ. ಇದರಲ್ಲಿ ೧೨,೫೦೦ ರೂ.ವನ್ನು ಜೆಡಿಎಸ್ ಪಕ್ಷದ ಕಾರ್ಯ ಕರ್ತರಿಂದ ಸಂಗ್ರಹಿಸಿ ಬಿ.ವೈ.ರಾಘವೇಂದ್ರ ಅವರಿಗೆ ನೀಡಲಾಯಿತು. ನಂತರ ಮಾತನಾಡಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೆವರು ಸುರಿಸಿ ಠೇವಣಿ ಹಣವನ್ನು ನೀಡಿದ್ದು, ಅವರ ಋಣವನ್ನು ತೀರಿಸುತ್ತೇನೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಕೂರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರಿಗೆ ಈ ಬಾರಿ ಚುನಾವಣೆಯಲ್ಲಿ ಮತ ಕೇಳುತ್ತಿದ್ದೇವೆ. ಮೈತ್ರಿಯಿಂದಾಗಿ ಎರಡು ಪಕ್ಷದವರಿಗೆ ಈ ಚುನಾವಣೆ ಮಹತ್ವದಾಗಿದೆ ಎಂದರು.
ನಮ್ಮ ಪಕ್ಷದ ನಾಯಕರು ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಮೈತ್ರಿಯನ್ನು ಮಾಡಿಕೊಂಡಿದ್ದು, ದೇಶ ಸ್ವಾಭಿಮಾನಿ ದೇಶವಾಗಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸ ಬೇಕಾಗಿದೆ. ಜೆಡಿಎಸ್ ಪಕ್ಷದವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿದ್ದು, ಅದೇ ರೀತಿ ಬಿಜೆಪಿಯವರು ಸಹ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ ಎಂದರು.
ಅಶಕ್ತರು ಮತ್ತು ದೀನದಲಿತರ ಪಾಲಿಗೆ ರಾಜ್ಯ ಸರ್ಕಾರ ಕಂಟಕವಾಗಿದೆ. ಗ್ಯಾರಂಟಿಗಳು ಸಮರ್ಪಕವಾಗಿ ತಲುಪುತ್ತಿಲ್ಲ ಅವರ ಅವರವರ ಜಗಳದಿಂದಲೇ ಚುನಾವಣೆ ನಂತರ ಸರ್ಕಾರ ಉರುಳಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.
ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ಪ್ರಭಾರಿ ರಘುಪತಿ ಭಟ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ಕೆ.ಎನ್. ರಾಮಕೃಷ್ಣ, ಉಮಾಶಂಕರ ಉಪಾಧ್ಯ, ಬೊಮ್ಮನಕಟ್ಟೆ ಮಂಜುನಾಥ್, ಗಂಧದಮನೆ ನರಸಿಂಹ, ಗೀತಾ ಸತೀಶ್, ಮಧುಕುಮಾರ್, ಗೋವಿಂದಪ್ಪ, ಸಿದ್ದಪ್ಪ, ತ್ಯಾಗರಾಜ್, ಎಸ್.ವಿ.ರಾಜಮ್ಮ, ಪುಷ್ಪ, ಅಬ್ದುಲ್ ವಾಜೀದ್ ಇನ್ನಿತರರು ಉಪಸ್ಥಿತರಿದ್ದರು.