ಶಿವಮೊಗ್ಗ : ಕೆಪಿಎಸ್ಸಿಯಲ್ಲಿ (ಕರ್ನಾಟಕ ಲೋಕಸೇವಾ ಆಯೋಗ) ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಇಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ೪೦೦ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ೪೦ ಲಕ್ಷದಿಂದ ೮೦ ಲಕ್ಷದವರೆಗೆ ಭ್ರಷ್ಟಾಚಾರವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಕೆಪಿಎಸ್ಸಿಯ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ವಿಚಾರಣಾ ಸಮಿತಿ ರಚನೆ ಮಾಡಲಾಗಿದೆ. ಇದು ಮೇಲು ನೋಟಕ್ಕೆ ಕೇವಲ ಆರೋಪಗಳಿಂದ ಮುಕ್ತರಾಗುವ ಒಳಸಂಚಾಗಿದ್ದು, ಯಾವುದೇ ಕಾರಣಕ್ಕೂ ಆಂತರಿಕ ವಿಚಾರಣಾ ಉಪಸಮಿತಿಯನ್ನು ರಚನೆ ಮಾಡದೆ ಅದನ್ನು ಕೈಬಿಟ್ಟು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತುರ್ತು ವಿಚಾರಣೆಗೆ ಆದೇಶ ನೀಡಬೇಕು ಎಂದು ಮನವಿದಾರರು ಆಗ್ರಹಿಸಿದರು.

ಈಗಾಗಲೇ ಉಪಸಮಿತಿ ತನಿಖಾವರದಿ ಬರುವವರೆಗೆ ಜುಲೈ ೧೭ ಎಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಡೆ ತಂದಿರುವುದು ಸ್ವಾಗತದ ವಿಷಯವೇ ಆಗಿದೆ. ಈಗಾಗಲೇ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರ್ ಎಸ್. ಸಾಹುಕಾರ್ ಅವರ ಮೇಲೆ ಎರಡು ಎಫ್ಐಆರ್ಗಳು ದಾಖಲಾಗಿವೆ. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆ ಅಕ್ರಮದಲ್ಲಿ ನರೇಂದ್ರಮೋದಿಯವರ ಸರ್ಕಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದಿದೆ. ಹಾಗೆಯೇ ಕೆಪಿಎಸ್ಸಿಯಲ್ಲೂ ಕೂಡ ೪೦೦ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ವೀಡಿಯೋ ಸಂಭಾಷಣೆಗಳು ಕೂಡ ಸೋರಿಕೆಯಾಗಿವೆ. ಇದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ


ರಾಜ್ಯದಲ್ಲಿಯೂ ಕೂಡ ಪ್ರತಿಭಟನೆಗಳು ತೀವ್ರವಾಗುವ ಸಾಧ್ಯತೆಯಿದೆ. ಆದ್ದರಿಂದ ವಿದ್ಯಾರ್ಥಿ ಸಮೂಹ, ರಾಜಕೀಯ ಪಕ್ಷಗಳು ಬೀದಿಗಿಳಿದು ಹೋರಾಟ ಮಾಡುವ ಮುಂಚೆಯೇ ಕೆಪಿಎಸ್ಸಿ ಅವ್ಯವಹಾರ ಬಗ್ಗೆ ತನಿಖೆಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಹೆಚ್.ಎಂ.ಸಂಗಯ್ಯ, ಆಲಿಂಖಾನ್, ಕೋಡ್ಲು ಶ್ರೀಧರ್, ಬಸವರಾಜ್ ಕೆ., ಶಂಕ್ರಾನಾಯ್ಕ, ಶಿವಣ್ಣ, ಆದಿಶೇಷ ಎಲ್., ಚಿದಾನಂದಮೂರ್ತಿ ಕೆ.ಎಂ., ರಾಮು, ಕಣ್ಣನ್, ಡಾ.ಸಣ್ಣಪ್ಪ ಇದ್ದರು.