ಶಿವಮೊಗ್ಗ ; ಕೆ.ಎಸ್. ಈಶ್ವರಪ್ಪನವರಿಗೆ ಮುಂದಿನ ದಿನದಲ್ಲಿ ಸರ್ಕಾರದ ನೇತೃತ್ವ ವಹಿಸುವ ಭಾಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಹರಸಿದ್ದಾರೆ.
ಅವರು ಇಂದು ಕೆ.ಎಸ್.ಈಶ್ವರಪ್ಪ ಅಭಿಮಾನಿ ಬಳಗದ ಸಹಕಾರದೊಂದಿಗೆ ಶ್ರೀಗಂಧ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ವತಿಯಿಂದ ಮಲ್ಲೇಶ್ವರ ನಗರದ ಶ್ರೀ ಕೆ.ಎಸ್.ಈಶ್ವರಪ್ಪನವರ ಮನೆಯ ಬಳಿ ಹಮ್ಮಿಕೊಂಡಿದ್ದ ಅವರ ೭೮ನೇ ಹುಟ್ಟುಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ರುದ್ರಪಠಣ, ಮಂಗಳನಿಧಿ ಸಮರ್ಪಣೆ, ಸಂಗೀತಾಭಿವಂದನೆ ಸಮೂಹ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಭಾಂಗಣ ಪ್ರವೇಶಿಸುವಾಗ ಫ್ಲೆಕ್ಸ್ನಲ್ಲಿ ಈಶ್ವರಪ್ಪನವರಿಗೆ ೭೮ನೇ ಹುಟ್ಟುಹಬ್ಬ ಎಂದಿತ್ತು. ಎಲ್ಲೋ ಅದು ತಪ್ಪಾಗಿದೆ ಎಂದು ಅನಿಸಿತು. ಏಕೆಂದರೆ ಅವರು ೨೮ರ ಯುವಕರಂತೆ ಸಮಾಜಕ್ಕಾಗಿ ಕ್ರೀಯಾಶೀಲರಾಗಿ ಬದುಕುತ್ತಿದ್ದಾರೆ. ಧರ್ಮದ, ಹಿಂದುತ್ವದ ಪ್ರಶ್ನೆ ಬಂದಾಗ ತನ್ನ ಹಿತವನ್ನು ಬಯಸದೆ ಸಮಾಜಕ್ಕಾಗಿ ಬದುಕುವುದೇ ನಿಜವಾದ ಬದುಕು ಎಂದು ತಿಳಿದು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದೊಂದಿಗೆ ಬೆರೆತು ಜೀವನ ನಡೆಸುತ್ತಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಭಗವಂತ ಅವರಿಗೆ ಆಯಸ್ಸು, ಆರೋಗ್ಯ, ಸುಖ-ಸಂತೋಷ ಎಲ್ಲವನ್ನು ಕರುಣಿಸಲಿ ಎಂದು ಆಶೀರ್ವದಿಸಿದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ಮಾತನಾಡಿ, ೭೮ರ ವಯಸ್ಸಿನಲ್ಲಿಯೂ ಅವರ ವ್ಯಕ್ತಿತ್ವ, ಕ್ರೀಯಾಶೀಲತೆ, ಮಾನಸಿಕ ಸದೃಢತೆ, ೨೮ರ ಯುವಕರದ್ದಾಗಿದೆ. ಅವರ ಜೀವನದ ಏರು-ಏರು ಏನೇ ಇರಲಿ, ಧರ್ಮ ಬಿಟ್ಟುಕೊಡಲಿಲ್ಲ. ರಾಜೀ ಮಾಡಿಕೊಂಡಿಲ್ಲ. ತಮ್ಮ ಸ್ಥಾನಮಾನ ಬಿಟ್ಟಿದ್ದಾರೆಯೇ ಹೊರತು, ತತ್ವವನ್ನು ಬಿಟ್ಟಿಲ್ಲ. ಹೋರಾಟದಿಂದಲೇ ರಾಜಕೀಯ ಅಸ್ವಿತ್ವ ಗಳಿಸಿಕೊಂಡವರು. ಸಮಾಜಕ್ಕೋಸ್ಕರ ಹಾಗೂ ಧರ್ಮಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡವರು. ಅವರು ಶತಾಯುಷಿಗಳಾಗಿ ಬದುಕಿ-ಬಾಳಲಿ. ಇನ್ನೂ ಹೆಚ್ಚಿನ ದೇಶ ಸೇವೆ ಮಾಡಲಿ ಎಂದು ಹಾರೈಸಿದರು.
ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ನೂರಾರು ವರ್ಷ ಯಾತಕ್ಕಾಗಿ ಬದುಕಬೇಕು ? ಹೇಗೆ ಬದುಕಬೇಕು ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಆತ್ಮಕ್ಕೆ ತಾವೇ ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಬದುಕು ನಮ್ಮ ಸ್ವಾರ್ಥಕ್ಕಾಗಿ ಅಲ್ಲ, ಪರಾರ್ಥವಾಗಿ, ಸಕಲ ಜೀವಿಗಳಿಗಗಿ, ಕಿಂಚತ್ತಾಗಿ ಬದುಕಿದಾಗ ಮಾತ್ರ ಜನ್ಮಕ್ಕೆ ಸಾರ್ಥಕತೆ ಬರುತ್ತದೆ. ಜಾತಿ, ಮತ, ಪಂಥದ ನಿರ್ಬಂಧವಿಲ್ಲದೆ, ಸರ್ವರಿಗೂ ಆತ್ಮೀಯರಾಗಿ ಈಶ್ವರಪ್ಪನವರು ಬೆಳೆದಿದ್ದಾರೆ. ಹುಟ್ಟು-ಸಾವು ಎನ್ನುವುದು ಖಾಯಂ. ಇದರ ಮಧ್ಯದಲ್ಲಿ ಇರುವ ಜೀವನವೇ ಬಹಳ ಮುಖ್ಯ. ಒಳ್ಳೆಯ ಕಾರ್ಯಗಳನ್ನು ಪಟ್ಟುಹಿಡಿದು ಸಾಧಿಸುವ ಛಲ ಇದ್ದವರು ಈಶ್ವರಪ್ಪ. ಎಲ್ಲಾ ಮಠ-ಮಂದಿರಗಳ ಕಲ್ಯಾಣ ಕಾರ್ಯಗಳಲ್ಲಿ ಅವರು ಕೈಜೋಡಿಸಿದ್ದಾರೆ. ಮಾತುಬಾರದ ಮೂಕ ಪ್ರಾಣಿಗಳಾದ ಗೋವುಗಳ ಸಂರಕ್ಷಣೆಗೆ ಸಂಘ ಸ್ಥಾಪಿಸಿ, ಗೋವರ್ಧನ ಟ್ರಸ್ಟ್ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಆದಿ ಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿ, ಹುಟ್ಟಿದಾಗ ಹುಸಿರು ಇರುತ್ತೆ. ದೇಹತ್ಯಾಗ ಮಾಡುವಾಗ ಬಿಟ್ಟುಹೋದ ದಾನ, ಧರ್ಮದ ಹೆಸರು ಇರುತ್ತದೆ. ಈಶ್ವರಪ್ಪನವರ ಸಾಧನೆ ಅವರಿಗೆ ಕೀರ್ತಿ, ಯಶಸ್ಸು ತಂದಿದೆ. ಅದಕ್ಕಾಗಿಯೇ ಅವರನ್ನು ಹರಸಲು ಜಗದ್ಗುರುಗಳು, ಯತಿವರೇಣ್ಯರು, ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಬಂದಿದ್ದಾರೆ. ರಕ್ತದನ ಶಿಬಿರ, ಶಾಲಾ ಮಕ್ಕಳಿಗೆ ಬುಕ್ ವಿತರಣೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ರುದ್ರ ಪಠಣ, ೫೦೦ಕ್ಕೂ ಹೆಚ್ಚು ಮಾತೆಯರಿಂದ ದೇಶೌಭಕ್ತಿ ಗೀತೆ ಗಾಯನ ಹಮ್ಮಿಕೊಂಡು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡಿ, ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಮಂಗಳನಿಧಿಯನ್ನು ಸ್ವೀಕರಿಸಿದ ಆರ್ಎಸ್ಎಸ್ ಮುಖಂಡ ಪಟ್ಟಾಭಿ ಮಾತನಾಡಿ, ನಮ್ಮ ಸಮಾಜದಲ್ಲಿ ವಿಶೇಷ ಪರಂಪರೆ ಇದ್ದು, ಯಾವುದೇ ಕಾರ್ಯವನ್ನು ಮಾಡುವಾಗ ಮೊದಲು ದೇವರು, ಗುರುಗಳನ್ನು ಹಾಗೂ ಬಂಧುಗಳನ್ನು ಕರೆದು ಸತ್ಕರಿಸಿ, ಕೃತಜ್ಞತಾ ಪೂರ್ವಕವಾಗಿ ಫಲ-ತಾಂಬೂಲ ಕೊಡುವ ಪದ್ಧತಿ ಇದೆ. ದೇವಋಣ, ಪಿತೃಋಣ, ಋಷಿಮುನಿಗಳ ಋಣ ತೀರಿಸಲಾಗುವುದಿಲ್ಲ. ಇಡೀ ಸಮಾಜ ಭಗವಂತನ ಒಂದು ಅಂಶ ಎಂದು ಮನಗಂಡು, ಸಮಾಜಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ಈ ಮಂಗಳ ನಿಧಿಯನ್ನು ಈಶ್ವರಪ್ಪನವರ ಕುಟುಂಬ ಸಮರ್ಪಿಸಿದೆ.
ಈ ನಿಧಿಯನ್ನು ನಾವು ಸಂಘದ ಕಾರ್ಯಕ್ಕೆ ಬಳಸದೆ ಮಂಗಳ ಕಾರ್ಯಕ್ಕೆ ಬಳಸುತ್ತೇವೆ ಈಶ್ವರಪ್ಪನವರಿಗೆ ೮೨ನೇ ವರ್ಷಕ್ಕೆ ಸಹಸ್ರ ಚಂದ್ರ ದರ್ಶನ ಶಾಂತಿಯೂ ಆಗಲಿ. ಹಿಂದುತ್ವ, ಸಂಘನಿಷ್ಠೆ, ದೇಶ ಮತ್ತು ಗುರುಗಳ ವಿಷಯದಲ್ಲಿ ಅವರು ಎಂದೂ ರಾಜೀಮಾಡಿಕೊಂಡಿಲ್ಲ. ಅವರ ಇಡೀ ಜೀವನದ ಯಶಸ್ಸಿನ ಸಿಂಹಪಾಲು ಅವರ ಶ್ರೀಮತಿಗೆ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ೫೦೦ಕ್ಕೂ ಹೆಚ್ಚು ಮಾತೆಯರಿಂದ ಭಕ್ತಿಗೀತೆ ಮತ್ತು ದೇಶಭಕ್ತಿಗೀತೆ, ಸಾಮೂಹಿಕ ಗಾಯನ ನಡೆಯಿತು.
ಈ ಸಂದರ್ಭದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಉತ್ತರ ಕರ್ನಾಟಕ ಭಾಗದ ಹಲವಾರು ಶ್ರೀಗಳು, ಪ್ರಮುಖರಾದ ಎಂಎಲ್ಸಿ ಡಿ.ಎಸ್. ಅರುಣ್, ಬಿ.ಕೆ.ಮೋಹನ್ಕುಮಾರ್, ಶ್ರೀಗಂಧ, ರಾಷ್ಟ್ರಭಕ್ತರ ಬಳಗ, ಗೋವರ್ಧನ ಟ್ರಸ್ಟ್ ಹಾಗೂ ಭಜನಾ ಪರಿಷತ್ನ ಪದಾಧಿಕಾರಿಗಳು ಮತ್ತು ಈಶ್ವರಪ್ಪನವರ ಅಪಾರ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು ಭಾಗವಹಿಸಿದ್ದರು.