ಶಿವಮೊಗ್ಗ : ನಾಡಿನ ರಾಜಕೀಯ ಮುತ್ಸದ್ಧಿ, ಹಿಂದುತ್ವದ ಪ್ರಖರಧ್ವನಿ, ಹಿಂದುಳಿದ ವರ್ಗಗಳ ನಾಯಕ, ಮಾಜಿ ಉಪಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬವನ್ನು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್, ಕೆ.ಎಸ್. ಈಶ್ವರಪ್ಪ ಅಭಿಮಾನಿಗಳ ಬಳಗದವತಿಯಿಂದ ಅತ್ಯಂತ ಸಡಗರ-ಸಂಭ್ರಮದಿಂದ ಜು ೧೦ರಂದು ಆಚರಿಸಲಾಗುವುದು ಎಂದು ಅಭಿಮಾನಿ ಬಳಗದ ಸಂಚಾಲಕ ಈ. ವಿಶ್ವಾಸ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂನ್ ೧೦ರ ಬೆಳಿಗ್ಗೆ ಗುಂಡಪ್ಪಶೆಡ್, ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯ ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸುಮಾರು ೪೦೦ಕ್ಕೂ ಹೆಚ್ಚು ಪುರೋಹಿತರಿಂದ ರುದ್ರಪಠಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಸುಮಾರು ೨೦೦೦ಕ್ಕೂ ಹೆಚ್ಚು ದಂಪತಿಗಳು, ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ೬೦೦ಕ್ಕೂ ಹೆಚ್ಚು ಮಾತೆಯರು ಸಮೂಹ ಭಕ್ತಿ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಮಂಗಳ ನಿಧಿ ಸಮರ್ಪಣೆ ಕೂಡ ಇರುತ್ತದೆ ಎಂದರು.
ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಬೆಕ್ಕಿನಕಲ್ಮಠ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ, ಮಾದಾರ ಚನ್ನಯ್ಯ ಸ್ವಾಮಿಗಳು, ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಾಮಯಾನಂದನಾಥ ಸ್ವಾಮೀಜಿ, ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಈಶ್ವರಪ್ಪನವರಿಗೆ ಶುಭ ಹಾರೈಸಲಿದ್ದಾರೆ ಎಂದರು.

ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ನಾಲ್ಕನೇ ವಾರ್ಡಿನ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಜೋಡಿಯಾಕ್ ಪ್ರಕಾಶ್ ನೇತೃತ್ವದಲ್ಲಿ ತರಳುಬಾಳು ಬಡಾವಣೆಯ ಸಾರ್ವಜನಿಕ ಉದ್ಯಾನವನದಲ್ಲಿ ಈಶ್ವರಪ್ಪನವರ ೭೮ನೇ ಹುಟ್ಟುಹಬ್ಬದ ನೆನಪಿಗಾಗಿ ೭೮ ಗಿಡಗಳನ್ನು ನೆಡುವರು.
ವಿನೋಬನಗರದಲ್ಲಿ ಶ್ರೀಕಾಂತ್ ಜೆ.ಪಿ.ಯವರು ೧೦೦ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್, ಹಣ್ಣು ವಿತರಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿವಮೊಗ್ಗದ ಜನತೆ ಪಾಲ್ಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಬಾಲು, ಸುವರ್ಣಾಶಂಕರ್, ಶಿವಾಜಿ, ನವುಲೆ ಈಶ್ವರಪ್ಪ, ಜಾದವ್, ಶ್ರೀಕಾಂತ್, ಆಶಾಚನ್ನಬಸಪ್ಪ, ಲಕ್ಷ್ಮೀಶಂಕರ್ ನಾಯಕ್, ವೆಂಕಟೇಶ್, ರಾಜು, ಕುಬೇರಪ್ಪ, ಸೂರ್ಯನಾರಾಯಣ ಸೇರಿದಂತೆ ಹಲವರಿದ್ದರು.
ಕೆ.ಎಸ್.ಈಶ್ವರಪ್ಪ, ಕರ್ನಾಟಕ ರಾಜಕಾರಣದ ಪ್ರಬಲ ನಾಯಕರು, ಆರ್.ಎಸ್.ಎಸ್.-ಎಬಿವಿಪಿ ಮೂಲಕ ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದವರು. ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಇಡೀ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ಈ ನಾಡಿಗೆ, ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಹಳ ಮುಖ್ಯವಾಗಿ ಹಿಂದುತ್ವದ ಪ್ರಬಲ ಧ್ವನಿಯಾಗಿದ್ದಾರೆ. ಶ್ರೀಗಂಧ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಾ ಬಂದಿದ್ದಾರೆ. ಅವರು ಸಾಂಸ್ಕೃತಿಕ ರಾಯಭಾರಿಯೂ ಹೌದು. ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನು ಗೆಳೆಯರ ಬಳಗದ ವತಿಯಿಂದ ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುವುದು.
-ಈ. ವಿಶ್ವಾಸ್