ಶಿವಮೊಗ್ಗ : ಇತ್ತೀಚೆಗೆ ಹಲ್ಲೆಗೊಳಗಾಗಿ ಮೃತಪಟ್ಟ ಸೂಳೆಬೈಲಿನ ಬಾಲಕ ಸಂಕೇತ್ನ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು ಆ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆಮಾಡಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಳೆಬೈಲಿನಲ್ಲಿರುವ ಮೃತ ಬಾಲಕನ ಸಮಾಧಿಯ ಧ್ವಂಸದ ಕೃತ್ಯ ಮುಸ್ಲಿಂ ಗೂಂಡಾಗಳಿಂದಾದ ಕೃತ್ಯವೇ ಆಗಿದೆ. ಅವರು ಹಿಂದೂಗಳ ಸಮಾಧಿಯನ್ನೂ ಬಿಡಲಾರರು ಎಂದರೆ ಅವರ ಅಟ್ಟಹಾಸ ಎಲ್ಲಿಯವರೆಗೆ ಇರಬೇಕು? ಇದನ್ನೆಲ್ಲ ನೋಡಿಕೊಂಡು ಸಹಿಸಿಕೊಳ್ಳಲು ಸಾಧ್ಯವೆ ಎಂದು ಖಾರವಾಗಿ ಪ್ರಶ್ನಿಸಿದ ಅವರು ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ತಾಕೀತು ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಯಲ್ಲಿ ನಿರತವಾಗಿದೆ. ತಾವು ಏನು ಮಾಡಿದರೂ ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿ ನಿಲ್ಲುತ್ತದೆ ಎಂಬ ಭಾವನೆ ಮುಸ್ಲಿಂ ಗೂಂಡಾಗಳಲ್ಲಿ ಬೇರೂರಿದೆ ಎಂದು ಕಿಡಿ ಕಾರಿದರು.
ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಅದನ್ನು ಕದಡಲು ಬಿಡಬೇಡಿ. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವಂತೆ ಜೊತೆಯಲ್ಲಿದ್ದ ಎಸ್ಪಿ ನಿಖಿಲ್ ಬಿ.ಅವರಿಗೆ ಕಿಮಾತು ಹೇಳಿದರು.
ಎಸ್ಪಿ ನಿಖಿಲ್ ಬಿ.ಮಾತನಾಡಿ ಸಂಕೇತ್ ಸಮಾಧಿ ಧ್ವಂಸದ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಇಷ್ಟರಲ್ಲಿಯೇ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗುವುದು ಎಂದು ಪ್ರತಿಕ್ರಯಿಸಿದರು.