ಶಿವಮೊಗ್ಗ : ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ನೆಹರೂ ಕ್ರೀಡಾಂಗಣದಲ್ಲಿ ನವುಲೆಯ ಅರುಣೋದಯ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೧೪ವರ್ಷ ವಯೋಮಿತಿಯೊಳಗಿನ ಅನುದಾನರಹಿತ ಪ್ರಾಥಮಿಕ ಶಾಲೆಗಳ ಎ ಮತ್ತು ಬಿ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಲ್ಲಿ ಆಸಕ್ತಿ ಈಗ ಕಡಿಮೆಯಾಗುತ್ತಿದೆ. ಹಾಗಾಗಬಾರದು ಕ್ರೀಡೆಗಳು ಕ್ರೀಯಾಶೀಲತೆಯನ್ನು ಮಕ್ಕಳಲ್ಲಿ ಹೆಚ್ಚಿಸುತ್ತವೆ. ಕೇವಲ ಅಂಕಗಳು ಮಾತ್ರ ಮುಖ್ಯವಲ್ಲ, ಪಠ್ಯೇತರ ಚಟುವಟಿಕೆಗಳು ಮುಖ್ಯವಾಗುತ್ತವೆ. ಸ್ಪರ್ಧೆ ಬಹಳ ಮುಖ್ಯ. ಗೆಲುವು-ಸೋಲು ಸಾಮಾನ್ಯ ಆದರೆ ಗೆಲ್ಲಲೇಬೇಕು ಎಂದು ಛಲವಿರಲಿ ಎಂದ ಅವರು, ಸಾಮಾನ್ಯವಾಗಿ ಅನುದಾನ ರಹಿತ ಶಾಲೆಗಳ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸುಧಾರಣೆಯಾಗಿರುವುದಿಲ್ಲ. ಆದರೂ ಕೂಡ ಅರುಣೋದಯ ಶಾಲೆಯವರು ಈ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಜೆಡಿಎಸ್ ಮುಖಂಡ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಕ್ರೀಡೆಗಳು ಬಹಳ ಮುಖ್ಯ. ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುತ್ತವೆ. ಸಾಮರಸ್ಯ ಭಾವನೆ ಕೂಡ ಬೆಳೆಯುತ್ತದೆ, ಅಲ್ಲದೆ ಕ್ರೀಡೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆ ನೀಡುತ್ತವೆ. ವಿದ್ಯಾರ್ಥಿವೇತನ, ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಹಕಾರಿಯಾಗುತ್ತದೆ ಎಂದರು.
ಅರುಣೋದಯ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಯು. ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ರಮೇಶ್, ದೈಹಿಕ ಶಿಕ್ಷಣಾಧಿಕಾರಿ ಚಂದ್ರಕಾಂತ್, ಸಿಆರ್ಪಿ ವೀರಾಚಾರ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ, ಮಠಪತಿ, ಮಾಜಿ ನಗರಸಭಾ ಸದಸ್ಯ ನವುಲೆ ಈಶ್ವರಪ್ಪ, ವೆಂಕಟೇಶ್, ಮುನಿಸ್ವಾಮಿ ಸೇರಿದಂತೆ ಹಲವರಿದ್ದರು.
‘ಎ’ ಗ್ರೂಪಿನ ೨೧, ‘ಬಿ’ ಗ್ರೂಪಿನ ೨೧ ಶಾಲೆಗಳ ಸುಮಾರು ೪೦೦ಕ್ಕೂ ಹೆಚ್ಚು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.