ಶಿವಮೊಗ್ಗ: ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಸೆ. ೨೧ರಂದು ಬೆಳಗ್ಗೆ ೬.೩೦ಕ್ಕೆ ನಶೆ ಮುಕ್ತ ಭಾರತಕ್ಕಾಗಿ ಎಂಬ ಘೋಷಣೆಯಡಿಯಲ್ಲಿ ’ನಮೋ ಯುವ ರನ್’ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಒಟ್ಟು ೧೦೦ ನಗರಗಳಲ್ಲಿ ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದ್ದು, ಇದು ಗಿನ್ನೆಸ್ ದಾಖಲೆಯಾಗಲಿದೆ. ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಇದಕ್ಕೆ ಅಂದು ಬೆಳಗ್ಗೆ ೭ ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದರು.

ಒಟ್ಟು ಜಿಲ್ಲೆಯಲ್ಲಿ ಈಗಾಗಲೇ ಕ್ಯೂಆರ್ ಕೋಡ್ ಮೂಲಕ ೪೭೦೦ ಜನ ನೋಂದಣಿ ಮಾಡಿದ್ದಾರೆ. ೧೮ ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು, ೧೮ರಿಂದ ೪೫ ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು, ೪೫ ವರ್ಷ ಮೇಲ್ಪಟ್ಟ ಪುರುಷರು ಮತತು ಮಹಿಳೆಯರು ಒಟ್ಟು ೬ ವಿಭಾಗ ಮಾಡಲಾಗಿದೆ. ಪ್ರಥಮ ಬಹುಮಾನ ೫ ಸಾವಿರ ರೂ., ದ್ವಿತೀಯ ೩ ಸಾವಿರ, ತೃತೀಯ ೨ ಸಾವಿರ ರೂ. ಬಹುಮಾನಗಳನ್ನು ೬ ವಿಭಾಗಕ್ಕೆ ನೀಡಲಾಗುವುದು ಎಂದರು.

೩.೫ ಕಿ.ಮೀ. ದೂರದ ಈ ಮ್ಯಾರಥಾನ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಗರದ ಶಿವಮೂರ್ತಿ ವೃತ್ತದಲ್ಲಿ ಬೆಳಗ್ಗೆ ೬.೩೦ಕ್ಕೆ ಉದ್ಘಾಟಿಸಲಿದ್ದು, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಹಾಗೂ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಭಾಗವಹಿಸಲಿದ್ದು, ಖ್ಯಾತ ನಟ ಗೌರಶಂಕರ್, ನಟಿ ಕಾರುಣ್ಯಾರಾಮ್ ಹಾಗೂ ರಾಷ್ಟ್ರೀಯ ಅಥ್ಲೆಟಿಕ್ ಸೌಮ್ಯಾ ಸಾವಂತ್ ಮತ್ತು ಗ್ರ್ಯಾಂಡ್ ಮಾಸ್ಟರ್ ಜಿ.ಎ. ಸ್ಟ್ಯಾನಿ ಭಾಗವಹಿಸಲಿದ್ದಾರೆ ಎಂದರು.

ಉಚಿತ ನೋಂದಣಿ ಇದ್ದು ನೆಹರೂ ಕ್ರೀಡಾಂಗಣ, ಮಹಾವೀರ ವೃತ್ತ, ಬಿಹೆಚ್ ರಸ್ತೆ, ಸಾವರ್ಕರ್ ವೃತ್ತ, ಶೀನಪ್ಪಶೆಟ್ಟಿ ವೃತ್ತ, ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ ಮತ್ತೆ ನೆಹರೂ ಕ್ರೀಡಾಂಗಣಕ್ಕೆ ಮ್ಯಾರಥಾನ್ ಮುಕ್ತಾಯಗೊಳ್ಳಲಿದ್ದು, ಮಾಹಿತಿ ಮತ್ತು ನೋಂದಣಿಗಾಗಿ ಧ್ರುವಕುಮಾರ್ ೯೬೧೧೩ ೧೨೯೭೧, ಸಂಜಯ್ ಕುಮಾರ್ ೯೯೮೦೨ ೯೯೯೦೫, ರಾಹುಲ್ ಬಿದರೆ ೮೦೯೫೩ ೩೭೮೭೬ ಸಂಪರ್ಕಿಬಹುದು. ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್ ಅನ್ನು ಉಚಿತವಾಗಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಹುಲ್ ಬಿದರೆ, ದರ್ಶನ್, ಅಭಿ, ಅರುಣ್ ಕುಗ್ವೆ, ಧ್ರುವಕುಮಾರ್, ಸಂಜಯ್, ಸಂತೋಷ್ ಶೇಟ್, ಪರಶುರಾಮ್, ಯಶಸ್ವಿ, ಪವನ್, ಅನಿಲ್, ಜಯರಾಮ್, ಅಣ್ಣಪ್ಪ ಇದ್ದರು.