ಶಿವಮೊಗ್ಗ: ಜಾತಿ ಗಣತಿಗೆ ಸಂಬಂಧಿಸಿದಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೇ ಸಂಪುಟದ ಅನೇಕ ಸಚಿವರು ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಮುಖ್ಯ ಮಂತ್ರಿಸಿದ್ದರಾಮಯ್ಯ ಅವರಿಗೆ ಆದ ಮುಖಭಂಗ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಫ ವ್ಯಾಖ್ಯಾನಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮಾಜವನ್ನು ಛಿದ್ರಗೊಳಿಸಲು ಜಾತಿ ಗಣತಿ ನೆಪದಲ್ಲಿ ಸಿದ್ದರಾಮಯ್ಯ ೩೩೧ ಹೊಸ ಜಾತಿಗಳನ್ನು ಸೃಷ್ಟಿಸಿದರು. ಈಗ ಸಚಿವ ಸಂಪುಟದ ಸದಸ್ಯರಿಗೇ ಅದರ ಗಂಭೀರತೆಯ ಮನವರಿಕೆ ಅಸಗಿದೆ. ಗಣತಿ ವಿರುದ್ಧ ರಾಜ್ಯದ ಇತಿಹಾಸದಲ್ಲೇ ನಡೆಯಬಾರದ ವಿದ್ಯಮಾನ ನಡೆದಿರುವುದು ಈಗ ಸಿದ್ದರಾಮಯ್ಯ ಓರ್ವ ಶಕ್ತಿ ಹೀನ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಕಟುವಾಗಿ ಟೀಕಿಸಿದರು.

ಈ ಹಿಂದೆ ಸಿದ್ದರಾಮಯ್ಯ ೧೬೫ಕೋಟಿ ರೂ.ವೆಚ್ಚ ಮಾಡಿ ಕಾಂತರಾಜ್ ವರದಿ ಸಿದ್ದಪಡಿಸಿದ್ದರು. ಎಂತಹ ಪರಿಸ್ಥಿತಿ ಬಂದರೂ ಅದನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಗುಡುಗಿದ್ದರು. ಇವರ ಅಂದಿನ ಶಕ್ತಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಬಗ್ಗಿತ್ತು. ಆದರೆ ನಂತರ ದೆಹಲಿಗೆ ಹೋಗಿ ಹಿಂತಿರುಗಿದ ಬಳಿಕ ಏಕಾಏಕಿ ಕಾಂತರಾಜ್ ವರದಿ ಜಾರಿಯ ಬಗ್ಗೆ ಮೌನಕ್ಕೆ ಶರಣಾದರು. ೧೬೫ ಕೋಟಿ ರೂ.ವೆಚ್ಚದ ವರದಿಗೆ ಬೆಂಕಿ ಇಟ್ಟರು. ಆ ವರದಿಯನ್ನು ಜಾರಿ ಮಡದೇ ಬಿಡುವುದಿಲ್ಲ ಎಂದು ಹೇಳಿದ್ದ ಅವರ ಛಲ ಈಗ ಎಲ್ಲಿ ಹೋಯಿತು ಎಂದು ಛೇಡಿಸಿದರು.
ಹಠ ಹಿಡಿದು ಜಾತಿ ಗಣತಿಯನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಮುಂದಾಗಿದ್ದೇ ಆದಲ್ಲಿ ಅವರು ಮುಖ್ಯಮಂತ್ರಿ ಖುರ್ಚಿ ಕಳೆದುಕೊಳ್ಳುವುದು ಶತ:ಸಿದ್ಧ ಎಂದು ಭವಿಷ್ಯ ನುಡಿದರು.
ಈಗ ೪೨೦ ಕೋಟಿ ರೂ.ವೆಚ್ಚದಲ್ಲಿ ಹೊಸ ಜಾತಿ ಗಣತಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸೆ.೨೨ರಿಂದ ಅ.೭ರ ವರೆಗೆ ಗಣತಿ ನಡೆಯಲಿದೆ ಎಂದಿದ್ದಾರೆ. ಪ್ರತಿ ಜಾತಿಗೂ ಕ್ರಿಶ್ಚಿಯನ್ ಧರ್ಮ ಸೇರಿಸಲಾಗಿದೆ. ಇದನ್ನು ಹಿಂದೂ ಸಮಾಜದವರು ಯಾರೂ ಒಪ್ಪುವುದಿಲ್ಲ. ಮತ್ತೆ ಈ ಆರ್ಥಿಕ ಹಾನಿ ಬೇಡ ಎಂದ ಅವರು ಅವರ ಸಂಪುಟದ ಸಚಿವರೇ ಈಗಿನ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಆ ಎಲ್ಲ ಹಿಂದೂ ಪರ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಜಾತಿ ಗಣತಿ ಮತಾಂತರಕ್ಕೆ ಬೆಂಬಲಿಸುವ ಕುತಂತ್ರ ರಾಜಕಾರಣ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಕೆ.ಇ.ಕಾಂತೇಶ್, ಪ್ರಮುಖರಾದ ಈ.ವಿಶ್ವಾಸ್, ನಕುಲ, ಮೋಹನ ಮೊದಲಾದವರಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗೆಹರಿಸಲು ತಮ್ಮ ಸರ್ಕಾರ ೬.೫೦ಕೋಟಿ. ರೂ.ಬಿಡುಗಡೆ ಮಾಡಿದೆ ಎಂದು ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದಕ್ಕೆ ಅವರಿಗೆ ಅಭಿನಂದಿಸುತ್ತೇನೆ. ಆದೇಶ ಕೇವಲ ಆದೇಶವಾಗಿ ಉಳಿಯಬಾರದು. ತಕ್ಷಣ ಅನುಷ್ಟಾನಕ್ಕೆ ಬರಬೆರಕು. ಸಂಸದ ಬಿ.ವೈ.ರಾಘವೇಂದ್ರ ಅವರು ಇದಕ್ಕೆ ಸಹಕರಿಸಬೇಕು ಎಂದು ಈಶ್ವರಪ್ಪ ಸಲಹೆ ನೀಡಿದರು.