ಶಿವಮೊಗ್ಗ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನೆಯು ಭಾನುವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು.
ತಿಲಕನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಹೊರವಲಯ ಬೊಮ್ಮನಕಟ್ಟೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠವಲ್ಲದೆ ಜಿಲ್ಲೆಯ ಬೇರೆ ಬೇರೆ ಸ್ಥಳದಲ್ಲಿರುವ ಶ್ರೀ ರಾಯರ ಮಠದಲ್ಲಿಯೂ ಶ್ರೀ ಸ್ವಾಮಿಗಳ ಆರಾಧನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು.


ಬೆಳಿಗ್ಗೆಯಿಂದಲೇ ಭಕ್ತರು ಶ್ರೀ ರಾಯರ ಮಠಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ವೇದವ್ಯಾಸ ದೇವರ ಪ್ರತಿಷ್ಠಾಪನೆ, ಅಷ್ಟೋತ್ತರ, ಪಂಚಾಮೃತ, ಮನೆ ಮನೆ ಪಾದಪೂಜೆ, ಮಹಾ ನೈವೇದ್ಯ, ತೀರ್ಥ ಪ್ರಸಾದ, ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ ನೆರವೇರಿತು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದ್ವಿತೀಯ ಮೃತ್ತಿಕಾ ವೃಂದಾವನ ಎಂದೇ ಖ್ಯಾತಿ ಪಡೆದಿರುವ ಶಿಕಾರಿಪುರ ತಾಲೂಕಿನ ಉಡುಗಣಿಯಲ್ಲಿ, ತೀರ್ಥಹಳ್ಳಿ ತಾಲುಕಿನ ಕಮ್ಮರಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ, ಮತ್ತು ಅದೇ ತಾಲೂಕಿನ ಬಾಳಗಾರು

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಗಳ ಆರಾಧನೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಾಳಗಾರು ಮಠದಲ್ಲಿ ಗುರುರಾಯರಿಗೆ ನೂತನ ರಥ ಸಮರ್ಪಣೆ ಕಾರ್ಯವೂ ನಡೆಯಿತು.

ಆ.೧೩ರ ವರೆಗೂ ಶ್ರೀ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಸ್ಥಳಗಳಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಪವಮಾನ ಹೋಮ, ಅವಭೃತ, ಮಹಾನೈವೇದ್ಯ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರಸಿದ್ಧ ಗಾಯಕರಿಂದ ಗೀತಗಾಯನ, ದಾಸ ಸಂಬ್ರಮ ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.