ಶಿವಮೊಗ್ಗ : ಹುಚ್ಚಾಸ್ಪತ್ರೆಯಲ್ಲೊಬ್ಬ ನಾನೇ ಡಾಕ್ಟರ್… ನಾನೇ ಡಾಕ್ಟರ್… ಎಂದು ಕೂಗಿಕೊಳ್ಳುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಟೀಕಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ಎನ್. ಚನ್ನಬಸಪ್ಪ ಅವರು ತಾವು ಶಾಸಕರು ಎಂಬುದನ್ನು ಮರೆತು ಬಾಯಿಗೆ ಬಂದ್ದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಹುಚ್ಚರ ಸಂತೆ ಎಂದು ಕರೆದಿದ್ದಾರೆ. ಇದು ಹುಚ್ಚಾಸ್ಪತ್ರೆಯಲ್ಲಿ ಸೇರಿರುವವರು ಆಡುವ ಮಾತಾಗಿದೆ. ಅವರು ಸಭ್ಯತೆಯನ್ನು ಕಲಿಯಬೇಕಾಗಿದೆ ಎಂದರು.

ಸಂತೋಷ್ಲಾಡ್ ಅವರನ್ನು ಸಮಾರಂಭದಲ್ಲಿ ಹಾಡಿಹೊಗಳಿದ ಇದೇ ಚನ್ನಿಯವರು ಬಾಯಿಗೆ ಬಂದಂತೆ ಅವರ ಬಗ್ಗೆ ಮಾತನಾಡುತ್ತಾರೆ. ಏಕೆಂದೇ ಅರ್ಥವಾಗುವುದಿಲ್ಲ. ಮೋದಿಯನ್ನು ಹೊಗಳಿದವರು ಮಾತ್ರ ಜಾಣರೇ, ಉಳಿದವರೆಲ್ಲಾ ಹುಚ್ಚರೇ ಆ ಮಾತಿನಲ್ಲಿ ಅವರಿಗೆ ಎಚ್ಚರಿಕೆ ಇರಲಿ ಜಿಲ್ಲಾ ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.

ಮೋದಿಯವರ ಬಗ್ಗೆ ರಾಹುಲ್ಗಾಂಧಿಯವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಚೀನಾ ಆಕ್ರಮಣದ ವಿಷಯವನ್ನು ಅವರ ಪಕ್ಷದವರೇ ಅನೇಕ ಬಾರಿ ಮಾತನಾಡಿದ್ದಾರೆ. ಕೆಲವು ನ್ಯಾಯಾಧೀಶರು ಕೂಡ ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ರಾಹುಲ್ಗಾಂಧಿಯವರು ಎತ್ತಿದ ಪ್ರಶ್ನಿಗಳಿಗೆ ಪ್ರಧಾನಿ ಮೋದಿಯವರಿಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದರು.
ಟಿಪ್ಪು ವಿಷಯ ಪ್ರಸ್ತಾಪಿಸಿದ ಅವರು ಕಾಂಗ್ರೆಸ್ ಸರ್ಕಾರ ಇದ್ದರೆ ಟಿಪ್ಪು ಸಾಮ್ರಾಜ್ಯ ಎಂದು ಹೆಸರಿಡುತ್ತಿದ್ದರು ಎಂದು ಶಾಸಕ ಅನಗತ್ಯವಾಗಿ ಟಿಪ್ಪು ಹೆಸರನ್ನು ತರುತ್ತಾರೆ. ಟಿಪ್ಪು ಜಯಂತಿ ದಿವಸ ಇದೇ ಬಿಜೆಪಿ ಪಕ್ಷದ ನಾಯಕರುಗಳು ಖಡ್ಗವನ್ನು ಎತ್ತಿ ಟಿಪ್ಪು ಜಯಂತಿಯಲ್ಲಿ ಮೆರೆದಿದ್ದನ್ನು ಇವರು ಮರೆತುಬಿಟ್ಟಿದ್ದಾರೆ. ಮುಸ್ಲಿಂರನ್ನು ಬೈದರೆ ಮಾತ್ರ ಹಿಂದೂಗಳ ಓಟು ಸಿಗುತ್ತದೆ ಎಂದು ಚನ್ನಬಸಪ್ಪ ಭ್ರಮೆಯಲ್ಲಿದ್ದಾರೆ ಎಂದರು.
ಟಿಪ್ಪುವಿಗೂ ಅಣೆಕಟ್ಟು ಕಟ್ಟುವ ಉದ್ದೇಶ ಇತ್ತು ಎಂಬುದು ನಿಜ. ಇದಕ್ಕೆ ಸಂಬಂಧಿಸಿದಂತೆ ಅಣೆಕಟ್ಟಿನ ಮುಂಭಾಗದಲ್ಲಿರುವ ಶಿಲಾನ್ಯಾಸವೇ ಸಾಕ್ಷಿಯಾಗಿದೆ. ಸುಮ್ಮನೆ ವಿವಾದಗಳನ್ನು ಸೃಷ್ಟಿಸುವುದು ಮತೀಯ ಹೇಳಿಕೆಗಳನ್ನು ನೀಡುವುದನ್ನು ಇನ್ನಾದರೂ ಇವರು ಬಿಡಬೇಕು ಎಂದ ಅವರು, ಸಂತೋಷ್ ಲಾಡ್ ಮತ್ತು ಶಿಕ್ಷಣ ಸಚಿವ ಮಧುಬಂಗಾರಪ್ಪನವರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಮತಗಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್ಗಾಂಧಿಯವರು ನಾಳೆ ಬೆಂಗಳೂರಿನಲ್ಲಿ ಬಹುದೊಡ್ಡ ಸಭೆಯನ್ನು ಕರೆದಿದ್ದು, ಈ ಸಭೆಗೆ ಶಿವಮೊಗ್ಗದಿಂದಲೂ ಕೂಡ ಸುಮಾರು ೮೦೦ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಶಿವುಕುಮಾರ್, ಜಿ.ಡಿ. ಮಂಜುನಾಥ್, ಎಸ್.ಟಿ. ಹಾಲಪ್ಪ, ಯು. ಶಿವಾನಂದ್, ಮಂಜುನಾಥ ಬಾಬು, ಶಿವಣ್ಣ, ಹೆಚ್.ಎಂ. ಮಧು, ಟಿ.ಡಿ. ಜಿತೇಂದ್ರಗೌಡ, ಭಾರತೀ ರಾಮಕೃಷ್ಣ, ಸುವರ್ಣಾ ನಾಗರಾಜ್, ಸ್ಟೇಲ್ಲಾ ಮಾರ್ಟಿನ್, ಅರ್ಚನಾ ನಿರಂಜನ ಮುಂತಾದವರಿದ್ದರು.