ಶಿವಮೊಗ್ಗ, ಜು.೦೯:
ಇತ್ತೀಚೆಗೆ ವಿದ್ಯಾರ್ಥಿಗಳು ಹದಿಹರೆಯದ ವಯಸ್ಸು ದಾಟುತ್ತಿದ್ದಂತೆಯೇ ತಾಯಿ-ತಂದೆ, ಅಣ್ಣತಮ್ಮಂದರಿಗೆ ಪ್ರೀತಿವಿಶ್ವಾಸ, ಗೌರವ ತೋರುವುದು ಕಡಿಮೆಯಾಗುತ್ತಿದೆ ಎಂದು ಸ್ಟೈಲ್ ಡ್ಯಾನ್ಸ್ ಕ್ರಿವ್ ನೃತ್ಯ ಸಂಸ್ಥೆ ಸಂಸ್ಥಾಪಕ ಎನ್ ಶಶಿಕುಮಾರ್ ಹೇಳಿದರು.

ಅವರು ಗುರುಪೂರ್ಣಿಮೆ ಅಂಗವಾಗಿ ಸ್ಟೈಲ್ ಡ್ಯಾನ್ಸ್ ಕ್ರಿವ್ ನೃತ್ಯ ಸಂಸ್ಥೆ ಆಯೋಜಿಸಿದ್ದ ಪೋಷಕರಿಗೆ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಮೌಲ್ಯ, ಸಾಮಾಜಿಕ ಪ್ರಜ್ಞೆ ಇಲ್ಲವಾಗುತ್ತಿದೆ ಆದ್ದರಿಂದ ಸಂಸ್ಕಾರ, ಸಾಮಾಜಿಕ ಮೌಲ್ಯ ಮತ್ತು ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಮಕ್ಕಳು ತಂದೆ-ತಾಯಿಯರನ್ನು ಗೌರವದಿಂದ ಕಾಣಬೇಕು. ಮಕ್ಕಳನ್ನು ಸಲಹುವ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರಿಗಾಗಿ ತಮ್ಮ ಸರ್ವಸ್ವವವನ್ನು ತ್ಯಾಗ ಮಾಡಿರುತ್ತಾರೆ. ಮಕ್ಕಳು ವೃದ್ದಾಪ್ಯದಲ್ಲಿ ತಂದೆ-ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಅವರ ಋಣವನ್ನು ತೀರಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೃತ್ಯ ವಿದ್ಯಾರ್ಥಿ ಮನೋಜ್ ಮಾತನಾಡಿ, ನಾವು ಮನೆಯಲ್ಲೇ ಇದ್ದರು ಬರೀ ಓದು, ಮೊಬೈಲ್ಗಳಲ್ಲಿ ಕಾಲಕಳೆಯುತ್ತಿದ್ದೇವು. ನಮ್ಮ ನೃತ್ಯ ಸಂಸ್ಥೆ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಂದೆ-ತಾಯಿಯರಿಗೆ ಪಾದಪೂಜೆ ಮಾಡಿದ ನಂತರ ಅವರ ಮೇಲೆ ಗೌರವ ಇನ್ನೂ ಹೆಚ್ಚಾಗಿದೆ ಎಂದರು.

ಪಾದಪೂಜೆಯ ನಂತರ ಪೋಷಕರಾದ ಯಶೋಧ ಮಾತನಾಡಿ, ಇತ್ತೀಚಿನ ಕಾಲದಲ್ಲಿ ನಮ್ಮ ಕಲೆ, ಸಂಸ್ಕೃತಿ ನಶೀಸಿಹೋಗುತ್ತಿದ್ದು, ಇಂತಹ ಸಂದರ್ಭದಲ್ಲಿ ನೃತ್ಯ ಸಂಸ್ಥೆಯಿಂದ ಮಕ್ಕಳಲ್ಲಿ ಸಂಸ್ಕಾರ, ನಮ್ಮ ಬಾರತೀಯ ಪರಂಪರೆಯ ಅರಿವನ್ನು ಮೂಡಿಸುತ್ತಿರುವ ಇವರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯದಲ್ಲಿ ನೃತ್ಯ ವಿದ್ಯಾರ್ಥಿಗಳ ಪೋಷಕರು, ಸಂಸ್ಥೆಯ ಸಿಬ್ಬಂದಿವರ್ಗ ಸೇರಿದಂತೆ ಹಲವರು ಇದ್ದರು.