ಶಿವಮೊಗ್ಗ, ಜು.01:
ಹೃದಯಾಘಾತದಿಂದ ಪದವಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಗ್ರಾಮದಲ್ಲಿ ನಡೆದಿದೆ.

ಶ್ರೀನಿಧಿ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ನಗರದ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ಪದವಿ ಅಭ್ಯಾಸ ಮಾಡುತ್ತಿದ್ದ.

ಜೂನ್ 29 ರ ಭಾನುವಾರ ಮುಂಜಾನೆ ಶ್ರೀನಿಧಿ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದು, ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.

ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಶ್ರೀನಿಧಿ ಮೃತಪಟ್ಟಿದ್ಧಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದು ಬಸವನಗಂಗೂರು ಗ್ರಾಮದ ನಿವಾಸಿ ಪ್ರಸನ್ನರವರು ಮಾಹಿತಿ ನೀಡಿದ್ದಾರೆ.
ಲವಲವಿಕೆಯಿಂದಿದ್ದ ಯುವಕ ಶ್ರೀನಿಧಿಯ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.