ಶಿವಮೊಗ್ಗ: ನಮ್ಮ ದೇಶದಲ್ಲಿ ಕಾಂಗ್ರೆಸ್ ನಿಂದ ಹೇರಿಕೆಯಾಗಿದ್ದ ತುರ್ತುಪರಿಸ್ಥಿತಿ ಎಂದೂ ಮರೆಯಲಾರದ, ಮರೆಯಬಾರದ ಸಾಹಸ ಗಾಥೆ ಎಂದು ಬಿಜೆಪಿ ಮುಖಂಡ, ಶಾಸಕ ಎಸ್.ಸುರೇಶ್ ಕುಮಾರ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ತುರ್ತುಪರಿಸ್ಥಿತಿಯ ಕರಾಳ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡುತ್ತಿದ್ದರು.

ದೇಶದಲ್ಲಿ ನಿಜವಾದ ಸ್ವಾತಂತ್ರ್ಯ ಹೋಗಿದ್ದೇ ಕಾಂಗ್ರೆಸಿ ನಿಂದ ತುರ್ತುಪರಿಸ್ಥಿತಿ ಹೇರಿಕೆಯಿಂದಾಗಿ ಎಂದ ಅವರು ಸಂವಿಧಾನ ನಾಶ ಮಾಡಿದ್ದೇ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು. ಡಾ.ಅಂಬೇಡ್ಕರ ಅವರು ಜೀವಿತವಾಗಿದ್ದಾಗ ಅವರಿಗೆ ಅವಮಾನ ಮಾಡಿದಷ್ಟೇ ಸಂವಿಧಾನಕ್ಕೆ ಅವಮಾನ ಮಾಡಿದ್ದೇ ಕಾಂಗ್ರೆಸ್ ಎಂದು ಹರಿಹಾಯ್ದರು.
ಇಂದಿರಾ ಗಾಂಧಿಯವರ ಸರ್ವಾಧಿಕಾರತ್ವದ ವಿರುದ್ಧ ಹೆಪ್ಪುಗಟ್ಟಿದ ವಿರೋಧ ದೇಶದಲ್ಲಿ ಆ ಕಾಲದಲ್ಲಿ ಮಡುಗಟ್ಟಿತ್ತು. ಅಂದಿನ ಗುಪ್ತಚರ ಇಲಾಖೆಯಂತೂ ಅತ್ಯಂತ ಅಪಾಯಕಾರಿಯಾಗಿತ್ತು. ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮದೇ ಸರ್ಕಾರದ ಯಾವ ಹಿರಿಯ ನಾಯಕರು, ಸಚಿವ ಸಂಪುಟದ ಸದಸ್ಯರನ್ನೂ ಕೇಳದೆ ತಮ್ಮ ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ದೇಶದ ಜನ ತುರ್ತುಪರಿಸ್ಥಿತಿಯ ವಿಪರೀತ ಹಿಂಸಾತ್ಮಕ ಪರಿಸ್ಥಿತಿಯನ್ನು ಅನುಭವಿಸಿದರು ಎಂದರು.

ತುರ್ತುಪರಿಸ್ಥಿತಯ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಭೂಗತವಾಗಿ ಮಾಡಿದ್ದ ಹೋರಾಟ ಎಂದೆಂದಿಗೂ ಅಜರಾಮರವಾಗಿದೆ. ಅಂದಿನ ಹೋರಾಟದಲ್ಲಿ ದೇಶದಲ್ಲಿ ೩೫ ಸಾವಿರ ಸಾಮಾನ್ಯ ಜನರನ್ನು ಮಿಸಾ ಕಾಯ್ದೆಯಡಿ ಲ್ಲೂ ೯೫ ಸಾವಿರ ಜನರನ್ನು ಡಿಐಆರ್ ಕಾಯ್ದೆ ಅಡಿಯಲ್ಲೂ ಅಂದಿನ ಕಾಂಗ್ರೆಸ್ ಸರ್ಕಾರ ಬಂಧಿಸಿ ಚಿತ್ರ ವಿಚಿತ್ರ ಹಿಂಸೆ ಕೊಟ್ಟಿತ್ತು ಎಂದು ಕಿಡಿ ಕಾರಿದರು.
ತುರ್ತುಪರಿಸ್ಥಿತಿಯಲ್ಲಿ ದೇಶ ಎಷ್ಟು ಕರಾಳ ಪರಿಸ್ಥಿತಿ ಎದುರಿಸುತ್ತಿತ್ತು ಅಂದರೆ ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣ ಹರಣ ಮಾಡಲಾಗಿತ್ತು. ಕೇವಲ ಎಐಆರ್ ಮೂಲಕ ಮಾತ್ರ ದೇಶದ ಆಗು ಹೋಗುಗಳು ಜನಸಾಮಾನ್ಯರಿಗೆ ತಿಳಿಯುತ್ತಿತ್ತು. ಆಲ್ ಇಂಡಿಯಾ ರೇಡಿಯೋ ಹೋಗಿ ಆಲ್ ಇಂದಿರಾ ರೇಡಿಯೋ ಆಗಿತ್ತು ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ನಮ್ಮನ್ನೆಲ್ಲ ಪ್ರೇರೇಪಿಸಿದ ಲೋಕ ನಾಯಕ ಜಯಪ್ರಕಾಶ್ ನಾರಾಯಣ್, ಎಲ್.ಕೆ.ಆಡ್ವಾಣಿ, ಮಧು ದಂಡವತೆ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ನ್ಯಾ.ಮೂ.ರಾಮಾ ಜೋಯಿಸ್, ಜಾರ್ಜ ಫನಾಂಡಿಸ್ ಮೊದಲಾದ ನಾಯಕರನ್ನು ಸ್ಮರಿಸಲೇಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಡಾ.ಶಿವಯೋಗಿಸ್ವಾಮಿ, ಪ್ರಮುಖರಾದ ಗಿರೀಶ್ ಪಟೇಲ್, ದತ್ತಾತ್ರಿ, ಮೋಹನ ರೆಡ್ಡಿ, ಟಿ.ಡಿ.ಮೇಘರಜ್, ಪದ್ಮನಾಭ ಭಟ್, ಜ್ಞಾನೇಶ್ವರ್, ರಾಮು ಮೊದಲಾದವರಿದ್ದರು.