ಶಿವಮೊಗ್ಗ : ಜೆಡಿಎಸ್ ಪಕ್ಷ ಸದೃಢವಾಗಿದೆ ಕೋಟ್ಯಾಂತರ ಕಾರ್ಯಕರ್ತರಿದ್ದಾರೆ. ಸದಸ್ಯತ್ವ ಅಭಿಯಾನದ ಜವಾಬ್ದಾರಿ ಎಲ್ಲಾ ನಾಯಕರು ವಹಿಸಿಕೊಳ್ಳಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಶಾಸಕರಾದ ಶಾರದಾ ಪೂರ್ಯಾನಾಯಕ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ಜನರೊಂದಿಗೆ ಜನತಾದಳ ಮಿಸ್ಡ್ಕಾಲ್ಡ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಪಕ್ಷ ಶಕ್ತಿಯುತವಾಗಿದೆ. ಇತ್ತೀಚೆಗೆ ಯುವನಾಯಕ ನಿಖಿಲ್ಕುಮಾರ್ ಸ್ವಾಮಿ ರಾಜ್ಯ ಯುವ ಜನತಾದಳದ ಅಧ್ಯಕ್ಷರಾದ ಮೇಲೆ ಪ್ರತಿ ಜಿಲ್ಲೆಗೂ ಭೇಟಿನೀಡಿ, ಪಕ್ಷವನ್ನು ಸಂಘಟಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ಯದೆಲ್ಲೆಡೆ ಅವರಿಗೆ ಉತ್ತಮ ಸ್ವಾಗತ ಸಿಗುತ್ತಿದೆ. ಒಳ್ಳೆಯ ಯುವ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದರು.

ಜೆಡಿಎಸ್ಗೆ ಹೆಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿಯಾದಾಗ ಮತ್ತು ಕುಮಾರಣ್ಣ ಅವರು ಮುಖ್ಯಮಂತ್ರಿಯಾದಾಗ ಮಾಡಿದ ಜನಪರ ಕಾರ್ಯಗಳೇ ಶ್ರೀರಕ್ಷೆ. ಪ್ರಧಾನಿಯಾಗಿದ್ದಾಗ ದೇವೇಗೌಡರು ಅನೇಕ ರೈತಪರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನೀರಾವರಿಗೆ ಅನೇಕ ರೀತಿಯ ಅನುಕೂಲ ಮಾಡಿದ್ದರು. ಐದು ವರ್ಷ ಪ್ರಧಾನಿಯಾಗಿದ್ದರೆ ದೇಶ ಸುಭಿಕ್ಷವಾಗುತಿತ್ತು. ಅವರ ಪ್ರಧಾನಿಯಾಗಿದ್ದೇ ರಾಜ್ಯದ ಜನರ ಅದೃಷ್ಟ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತಂದರು. ಈಗಲೇ ರಾಜ್ಯದ ಜನ ಅವರನ್ನು ನೆನೆಪಿಸಿಕೊಳ್ಳುತ್ತಾರೆ. ಉತ್ತಮ ಅಭ್ಯರ್ಥಿಯ ಆಯ್ಕೆ ಆದಲ್ಲಿ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ. ಎಲ್ಲಾ ಕಾರ್ಯಕರ್ತರು ಮತ್ತು ನಾಯಕರು ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಲನೀಡಿ, ಪಕ್ಷವನ್ನು ಸಂಘಟಿಸಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ವಹಿಸಿದ್ದರು. ಕಾರ್ಯಾಧ್ಯಕ್ಷ ಪ್ರಮುಖರಾದ ರಾಮಕೃಷ್ಣ, ಪ್ರಮುಖರಾದ ಶಾರದಾ ಅಪ್ಪಾಜಿಗೌಡ, ದೀಪಕ್ಸಿಂಗ್, ಗಂಧದಮನೆ ನರಸಿಂಹ, ಮಧುಕುಮಾರ್, ಗೀತಾ ಸತೀಶ್, ಸುರೇಶ್, ಸಂಗಯ್ಯ, ಯೂಸೂಫ್ ಫಯಾಜ್, ಅಲ್ತಾಫ್, ಶ್ಯಾಂ, ನಿಖಿಲ್, ವಿನಯ್, ರಮೇಶ್ ಬಿ. ನಾಯಕ್, ವೆಂಕಟೇಶ್, ಗಣಪತಿ ಮೊದಲಾದವರಿದ್ದರು.