ಶಿವಮೊಗ್ಗ : ಈ ಬಾರಿಯ ಘೋಷ ವಾಕ್ಯ “ಒಂದೇ ಭೂಮಿ ಒಂದೇ ಆರೋಗ್ಯ” ಎಂಬುದಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 21 ರಂದು ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಲಾಗುವುದು.
ಪ್ರಸ್ತುತ ದಿನಗಳಲ್ಲಿ ಹಲವು ರಾಷ್ಟ್ರಗಳು ಯುದ್ಯೋನ್ಮಾದದಿಂದ ಅಶಾಂತಿಯನ್ನು ತಂದಿಡುತ್ತಿವೆ. ಜೊತೆಯಲ್ಲಿ ಮಾನವ ಕುಲವನ್ನೇ ನಾಶ ಮಾಡುವ ಅಣ್ವಸ್ತ್ರ ಬಳಸುವ ಬೆದರಿಕೆಯೂ ಇದೆ. ಈ ರಸಾಯನಕಗಳನ್ನು ಬಳಸಿ ನಮಗೆ ಜನ್ಮ ನೀಡಿ ಆಸರೆ ನೀಡುತ್ತಿರುವ ಭೂಮಿಯನ್ನೇ ನಾಶಪಡಿಸಿ ಮುಗ್ಧ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಬದುಕುಳಿದ ಜನರ ಆರೋಗ್ಯವನ್ನು ಹದಗೆಡಿಸುತ್ತಿವೆ. ಈ ಸಂದರ್ಭದಲ್ಲಿ ವಿಶ್ವ ಯೋಗ ದಿನದ ಘೋಷ ವಾಕ್ಯ ಅತ್ಯಂತ ಅರ್ಥಪೂರ್ಣವಾಗಿದೆ.

ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ.ರುದ್ರಾರಾಧ್ಯರು ಮತ್ತು ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಶ್ರೀ ರುದ್ರೇಗೌಡರ ಚಿಂತನೆಗಳು ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರದ ದೇಯೋದ್ದೇಶಗಳು ಪೂರಕವಾಗಿರುವುದರಿಂದ ಶಿವಮೊಗ್ಗ ನಗರವು ಶಿವ ಯೋಗ ನಗರವಾಗುವುದರಲ್ಲಿ ಸಂದೇಹವೇ ಇಲ್ಲ.
ಆದಿಯೋಗಿಶಿವ ಪ್ರಪಂಚಕ್ಕೆ ಸಪ್ತ ಋಷಿಗಳಿಗೆ ಬೋಧಿಸುವ ಮೂಲಕ ಯೋಗವನ್ನು ಧಾರೆ ಎರೆದಂತ ಆದಿಯೋಗಿ ಶಿವನ ಸುಂದರ ಮೂರ್ತಿ ಸನಿಹದಲ್ಲೇ ಕಾಣುವ ಅಭೀಷ್ಟವರದ ಗಣಪತಿ ಯೋಗದ ದಿವ್ಯಮಾರ್ಗ ತೋರಿದ ಪತಂಜಲಿ ಮಹರ್ಷಿಗಳ ಸುಂದರ ಮೂರ್ತಿಗಳು, ವನಸ್ಪತಿ ಔಷಧಿಯುಕ್ತ, ಫಲಗಳನ್ನು ನೀಡುವ ವಿವಿಧ ಜಾತಿಯ ಹೂಗಳನ್ನು ನೀಡುವ ಸಸ್ಯಗಳು ಹೊಂದಿರುವ ಸುಂದರ ಪರಿಸರದಲ್ಲಿ ಯೋಗ ಕೇಂದ್ರ ಕಣ್ಮನ ಸೆಳೆಯುತ್ತದೆ.

ನಮ್ಮ ಹೆಮ್ಮೆಯ ಯೋಗ ಕೇಂದ್ರದ ಲಾಂಛನದಲ್ಲಿರುವ “ಸಾ ವಿದ್ಯಾ ಯಾ ವಿಮುಕ್ತಯೇ ಎಂಬ ಉಕ್ತಿಯು ಯೋಗಶಾಸ್ತ್ರದ ಮಹತ್ವವನ್ನು ತಿಳಿಸುವುದು. ಅಜ್ಞಾನದಿಂದ ಜ್ಞಾನದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಜ್ಞಾನ ಯೋಗದಲ್ಲಡಗಿದೆ. ಇನ್ನು ಜ್ಯೋತಿ ಶ್ರೀ ಶಿವಗಂಗಾ ಯೋಗ ಕೇಂದ್ರವು ಇಂತಹ ದಿವ್ಯಜೋತಿಯ ಪ್ರತೀಕ. ತ್ರಿಕೋನಾಕೃತಿಯ ಪಿರಮಿಡ್ ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ದೈವತ್ವದ ಕಡೆಗೆ ಕೊಂಡೊಯ್ಯುವ ಸಾಧನ.
ಆಶೀರ್ವಾದದ ಫಲ, ಸಾಧು ಸಂತರು ಹಾಗೂ ಹಿರಿಯರು ಆಶೀರ್ವದಿಸುವಾಗ ನಿಮಗೆ ಆಯುರಾರೋಗ್ಯ ಲಭಿಸಲಿ ಎಂದು ಹರಸುವುದನ್ನು ಕೇಳಿದೇವಲ್ಲವೇ ಹಾಗೆಯೇ ನಮ್ಮ ಶ್ರೀ ಶಿವಗಂಗಾ ಯೋಗ ಕೇಂದ್ರವು ಜಾತಿ ಮತ್ತು ಪಂಥದ ಭೇದವಿಲ್ಲದೆ ಎಲ್ಲರಿಗೂ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಧಾರೆಯೆರೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳಬಹುದು.

ಇನ್ನು ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಣ ಪಡೆದ ವ್ಯಕ್ತಿಯ ಧನ್ಯತಾಭಾವದ ಪ್ರತೀಕವೇ ಯೋಗ. ಕೇಂದ್ರದ ದಾರಿಯ ಆರಂಭದ ಸ್ವಾಗತ ಕಮಾನಿನ ಹಿಂಭಾಗದಲ್ಲಿ ರಚನೆಯಾಗಿರುವ ಗುರುವಿನ ರೂಪ ಮತ್ತು ಅದಕ್ಕೆ ಶರಣಾದ ಸಂತೃಪ್ತಿ ಭಾವ ಹೊಂದಿದ ವ್ಯಕ್ತಿಯ ಮನದ ತುಡಿತ, ತನು ಮನವ ಸಂತೈಸಿ ಅರಿವಿನ ಜ್ಯೋತಿ ಬೆಳಗುವ ಗುರುವೇ ನಿಮಗೆ ಶರಣು ಎನ್ನುವ ಭಾವವನ್ನು ವ್ಯಕ್ತಪಡಿಸಲಾಗಿದೆ.
ಯೋಗ ಅಭ್ಯಾಸವನ್ನು ಪ್ರಣವದೊಂದಿಗೆ ಆರಂಭಿಸಿ ಪ್ರಾರ್ಥನೆ, ಆಸನಗಳು, ಪ್ರಾಣಾಯಾಮ, ಧ್ಯಾನವನ್ನು ಕ್ರಮಬದ್ಧವಾಗಿ ಮಾಡಿ, ಮಾನವೀಯತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಸ್ವೀಕರಿಸಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಶಿಕ್ಷಣಾರ್ಥಿಗಳು ಸಾರ್ವಜನಿಕರು ಭಾಗವಹಿಸಲು ಕೋರಲಾಗಿದೆ.
ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ 36 ಯೋಗ ಶಾಖೆಗಳಿದ್ದು, ನುರಿತ ಯೋಗ ಶಿಕ್ಷಕರು ನಿತ್ಯ ಸುಮಾರು 900 ಯೋಗ ಶಿಕ್ಷಣಾರ್ಥಿಗಳಿಗೆ ನಿತ್ಯ ಯೋಗ ಅಭ್ಯಾಸ ಮಾಡಿಸುತ್ತಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಸ್ನಾತಕೋತ್ತರ ಯೋಗ ಡಿಪ್ಲೋಮಾ ಪದವಿ ಪಡೆದ ಶಿಕ್ಷಕರು ಇಲ್ಲಿ ಸೇವೆಯನ್ನು ಸಲ್ಲಿಸುತ್ತಿರುವರು.