ಶಿವಮೊಗ್ಗ: ಶ್ರೀ ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಮೈಕ್ರೋ ಫೈನಾನ್ಸ್ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾ ಪ್ರೋತ್ಸಾಹನಿಧಿ ಹಾಗೂ ಸದಸ್ಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಜೂ. ೧ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪರವಾಗಿ ರಾಷ್ಟ್ರಭಕ್ತರ ಬಳಗದ ಮಾಜಿ ಮೇಯರ್ ಸುವರ್ಣಾ ಶಂಕರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ೨೦೧೩ರಲ್ಲಿ ಆರಂಭವಾಯಿತು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ದೂರದೃಷ್ಠಿ, ಸಾಮಾಜಿಕ ಕಳಕಳಿ ಹಾಗೂ ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಈ ಟ್ರಸ್ಟ್ ಆರಂಭವಾಗಿದ್ದು, ಇಂದು ಇದು ಹೆಮ್ಮರವಾಗಿ ಬೆಳೆದಿದೆ. ಸುಮಾರು ೨೪೮೫ ಸಂಘಗಳಿವೆ. ಇದುವರೆಗೂ ೮೬ ಕೋಟಿ ರೂ.ಗಳನ್ನು ಸಾಲವಾಗಿ ನೀಡಲಾಗಿದೆ. ಮಹಿಳೆಯರು ಈ ಸಾಲವನ್ನು ಉಪಯೋಗಿಸಿಕೊಂಡು ಸರಿಯಾದ ಸಮಯಕ್ಕೆ ವಾಪಸ್ ಕೊಟ್ಟಿದ್ದಾರೆ. ಟ್ರಸ್ಟ್ ಸ್ಥಾಪನೆಯಾಗಿ ಎರಡು ವರ್ಷಗಳ ನಂತರ ೨೦೧೫ರಲ್ಲಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಆರಂಭವಾಯಿತು. ಅಂದಿನಿಂದ ಇಲ್ಲಿಯವರೆಗೂ ಕೂಡ ಸಂಘದ ಮಹಿಳೆಯರ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿದೆ ಎಂದರು.

ಭಾರತೀಯ ರಿಸರ್ವ್ ಬ್ಯಾಂಕಿನ ಅಡಿಯಲ್ಲಿಯೇ ಅದರ ನಿಬಂಧನೆಗೆ ಒಳಪಟ್ಟು ಮೈಕ್ರೋ ಫೈನಾನ್ಸ್ ಕೆಲಸ ಮಾಡುತ್ತಿದೆ. ಮಹಿಳೆಯರು ಸಾಲ ಪಡೆದು ಬೀದಿ ಬದಿ ವ್ಯಾಪಾರ, ಸಣ್ಣ ಗೃಹ ಕೈಗಾರಿಕೆ, ಸ್ಥಾಪನೆ ಮಾಡುವ ಮೂಲಕ ಪ್ರಗತಿ ಸಾಧಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸದಸ್ಯ

ಕುಟುಂಬದವರಿಗಾಗಿ ಆರೋಗ್ಯ ಶಿಬಿರ, ಶೈಕ್ಷಣಿಕ ಸಹಾಯ, ಧಾರ್ಮಿಕ ಪ್ರವಾಸ, ಉದ್ಯೋಗ ಮೇಳ, ಉಚಿತ ಸೀರೆಗಳ ವಿತರಣೆ, ಸಾಮೂಹಿಕ ವಿವಾಹ, ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಟ್ರಸ್ಟ್ ನಡೆಸಿಕೊಂಡು ಬರುತ್ತಿದೆ ಎಂದರು.

ಇದರ ಮುಂದಿನ ಭಾಗವಾಗಿ ಜೂ. ೧ರಂದು ಭಾನುವಾರ ಬೆಳಗ್ಗೆ ನೆಹರೂ ಕ್ರೀಡಾಂಗಣದಲ್ಲಿ ಸದಸ್ಯರಿಗಾಗಿ ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಮತ್ತು ಜೂ. ೧೦ರಂದು ಸಂಜೆ ಶುಭಮಂಗಳ ಸಮುದಾಯ ಭವನದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ. ೮೫ಕ್ಕೂ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಮತ್ತು ನಗರದ ಇತರ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾ ಪ್ರೋತ್ಸಾಹಧನ ಹಾಗೂ ಬಹುಮಾನತ ವಿತರಿಸಲಾಗುವುದು ಎಂದರು.
ಈ ಎಲ್ಲಾ ಕಾರ್ಯಕ್ರಮಗಳು ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಅವರ ಮುಂದಾಳತ್ವದಲ್ಲಿ ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ೪೨೫ನೇ ರ್ಯಾಂಕ್ ಪಡೆದ ಮೇಘನಾ, ಕ್ರೀಡಾಪಟು ಗೌತಮಿ ಗೌಡ, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.