|
ಶಿವಮೊಗ್ಗ: ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ವಚನಗಳ ಗಾಯನಕ್ಕೆ ಅತೀ ದೊಡ್ಡ ವೇದಿಕೆ ನಿರ್ಮಾಣವಾಗುತ್ತಿದೆ. ಇಲ್ಲಿ ಹಾಡುವ `ಸಾವಿರದ ವಚನಗಳು’ ಕೇವಲ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗದೆ ಗಾಯಕರ ಹಾಗೂ ಕೇಳುಗರ ಜೀವನಕ್ಕೆ ಜೊತೆಯಾಗಿ ನಿಲ್ಲಲಿವೆ ಎಂದು ಶಿವಮೊಗ್ಗ ಗುರುಗುಹ ಸಂಗೀತ ಶಾಲೆಯ ವಿದ್ವಾನ್ ಶೃಂಗೇರಿ ನಾಗರಾಜ್ ಹೇಳಿದ್ದಾರೆ.
ಇದೇ 9ರಂದು ಅಲ್ಲಮ ಬಯಲಿನಲ್ಲಿ ಹಮ್ಮಿಕೊಂಡಿರುವ ಸಾವಿರ ಜನ ಏಕಕಾಲದಲ್ಲಿ ವಚನಗಳನ್ನು ಹಾಡುವ `ಸಾವಿರದ ವಚನಗಳು’ ಕುರಿತು ಸಂಗೀತ ವಿದ್ವಾಂಸರು ಹಾಗೂ ಗಾಯಕರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇಲ್ಲಿರುವ ವಚನಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ. ಮನದಲ್ಲಿ ಉಳಿಯುವಂತವು. ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿ ಮೂಡಿ ಬರಲು ಶಿವಮೊಗ್ಗದ ಸಂಗೀತಗಾರರು, ಗಾಯಕರು ಒಟ್ಟಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮನುಕುಲಕ್ಕೆ ಕನ್ನಡದ ಮೂಲಕ ದೊರೆತ ಮಹತ್ತರ ನಿಧಿಯಾದ ಈ ವಚನಗಳು ಎಲ್ಲರಿಗೂ ತಲುಪಲಿ, ಮುಕ್ತ ಮನಸ್ಸಿನಿಂದ ಎಲ್ಲರೂ ಇದರ ಫಲಾನುಭವಿಗಳಾಗಲಿ ಎಂದ ಮಹತ್ತರ ಉದ್ದೇಶದಿಂದ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳ ಸಂಕಲ್ಪಕ್ಕೆ ಶಿವಮೊಗ್ಗದ ಬಹುಪಾಲು ಎಲ್ಲಾ ಪ್ರಕಾರದ ಸಂಗೀತ ವಿದ್ವಾಂಸರು, ಗಾಯಕರು ಕೈಜೋಡಿಸಿದ್ದಾರೆ. ಈ ಹಿನ್ನಲೆಯಲ್ಲಿ `ಸಾವಿರದ ವಚನ’ ಗಾಯನ ಕಾರ್ಯಕ್ರಮ ಶಿವಮೊಗ್ಗದ ಮಟ್ಟಿಗೆ ಎಲ್ಲಾ ಬಗೆಯ ಸಂಗೀತ ಕಲಾವಿದರ ಸಂಗಮವೇ ಆಗಿದೆ ಎಂದು ವಿವರಿಸಿದರು.

ಸಿ.ಅಶ್ವಥ್ ಅವರೊಂದಿಗೆ ಕೂಡಲ ಸಂಗಮ ಧ್ವನಿ ಸುರಳಿಯಲ್ಲಿ ಹಾಡಿದ್ದ ಶಿವಮೊಗ್ಗದ ಕೆ. ಯುವರಾಜ್ ಮಾತನಾಡಿ, ಕನ್ನಡದ ಸಂಗೀತ ಪ್ರಿಯರಿಗೆ ಹಾಗೂ ವಚನ ಪ್ರಿಯರಿಗೆ ಸಿ.ಅಶ್ವಥ್ ನೀಡಿದ ಬಹುದೊಡ್ಡ ಕೊಡುಗೆ ಈ ಹಾಡುಗಳು ಎಂದು ಹೇಳಿದರು.

ಸಿ.ಅಶ್ವಥ್ ಅವರು ವೈವಿಧ್ಯಮಯ ಶೈಲಿಯ, 30ಕ್ಕೂ ಹೆಚ್ಚು ವಾದ್ಯಗಳನ್ನು ಬಳಸಿಕೊಂಡು ಸಂಯೋಜನೆ ಮಾಡಿರುವ ಏಕೈಕ ವಚನ ಗಾಯನ ಇದಾಗಿದೆ. ಈ ವಚನಗಳ ಮೂಲಕ ಸಿ. ಅಶ್ವಥ್ ನಮ್ಮ ನಡುವೆ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದರು.
ಖ್ಯಾತ ಗಾಯಕಿ ಸುರೇಖಾ ಹೆಗಡೆ, ಏಕಕಾಲದಲ್ಲಿ ಸಹಸ್ರ ಕಂಠದಲ್ಲಿ ಮೂಡಿ ಬರುವ ಈ ವಚನ ಗಾಯನ ವಿನೂತನ ದಾಖಲೆಯಾಗಲಿದೆ. ಜನರಿಂದ ದೊರಕಿದ ಸ್ಪಂದನೆ ಅಪರೂಪದ್ದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿದ್ದ ಕಲಾವಿದರ ಸಂಯೋಜಕ ಆರ್.ಎಸ್. ಹಾಲಸ್ವಾಮಿ ಮಾತನಾಡಿ, ಸಿ. ಅಶ್ವಥ್ ಅವರೊಂದಿಗೆ ಕೆಲಸ ಮಾಡಿದ ಮೈಸೂರಿನ ಜನ್ನಿ ಹಾಗೂ ಬೆಂಗಳೂರಿನ ಸುದರ್ಶನ್ ಈ ಸಾವಿರದ ವಚನ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಹಿಂದುಸ್ತಾನಿ ಸಂಗೀತದ ಹಿರಿಯರಾದ ಹುಮಾಯೂನ್ ಹರ್ಲಾಪುರ್ ಅವರು ನಮ್ಮೊಂದಿಗಿದ್ದಾರೆ ಎಂದರು.
ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್, ಮಂಜುಳಾ, ನಾಗರತ್ನ, ಪ್ರಹ್ಲಾದ್, ವಿನಯ್ ಶಿವಮೊಗ್ಗ, ಜಯಶ್ರೀ ಶ್ರೀಧರ್, ಉಮಾ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.