ಶಿವಮೊಗ್ಗ, ಏ, 29; ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಶಿವಮೊಗ್ಗ ಜಿಲ್ಲೆಯ ಹೊಳಲೂರು ಏತನೀರಾವರಿ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅನುಮೋದನೆ ನೀಡಿದ್ದು, 4.80 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತುಂಗಭದ್ರಾ ನದಿಯಿಂದ ನಾರಾಯಣ ಕೆರೆ, ಸೀಗೆಹಳ್ಳಿ, ಬೂದಿಗೆರೆ ಕೆರೆ, ಸುತ್ತುಕೋಟೆ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ನೀರೆತ್ತುವ ವ್ಯವಸ್ಥೆಯನ್ನು ದುರಸ್ತಿ, ನವೀಕರಣಗೊಳಿಸುವ, ಪಂಪ್ ಮೋಟಾರ್ ಗಳ ರಿಪೇರಿ, ಹರಮಘಟ್ಟ ಕೆರೆ ಪಾತ್ರದ ಹೊಸ ಪ್ರದೇಶಗಳಿಗೆ ಮೋಟಾರು ಪರಿಕರಗಳನ್ನು ಸಾಗಿಸುವ, ಸೀಗೆ ಕೆರೆ ಬಳಿ ಹೊಸದಾಗಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡುವಂತೆ ಸೂಚಿಸಿದ್ದಾರೆ.

ಕಳೆದ ವರ್ಷ ಸೊರಬಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಮಾರ್ಚ್ 8 ರಂದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರು ಸ್ಥಳ ಪರಿಶೀಲನೆ ಮಾಡಿದ್ದರು. ಇದಾದ ಒಂದೂವರೆ ತಿಂಗಳಲ್ಲಿ ಪುನಃಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಸಚಿವ ಎನ್.ಎಸ್. ಬೋಸರಾಜು ಅವರು ಸ್ವತಃ ಮುತುವರ್ಜಿ ವಹಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ಜಾರಿ ಮಾಡಿರುವ ಬಗ್ಗೆ ಕೊಮ್ಮನಹಾಳು, ಹರಮಗಟ್ಟೆ ಸೋಮಿನ ಕೊಪ್ಪ ಮತ್ತಿತರೆ ಗ್ರಾಮಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಬಹಳಷ್ಟು ವರ್ಷಗಳಿಂದ ದುರಸ್ತಿಗಾಗಿ ಪ್ರಯತ್ನ ನಡೆಸಿದ್ದೇವು. ಬೆಂಗಳೂರಿಗೆ ಹಲವು ಬಾರಿ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಸಚಿವರು ಬೇರೆಯವಂತೆ ಆಶ್ವಾಸನೆ ನೀಡಿಲ್ಲ. ನೀಡಿದ ವಾಗ್ದಾನದಂತೆ ತ್ವರಿತವಾಗಿ ಸ್ಪಂದಿಸಿದ್ದಾರೆ. ಇದು ಸಣ್ಣ ನೀರಾವರಿ ಯೋಜನೆಗಳ ಬಗ್ಗೆ ಸಚಿವರಿಗಿರುವ ಬದ್ಧತೆಯ ಪ್ರತೀಕವಾಗಿದೆ. ಸರ್ಕಾರಿ ಆದೇಶದ ಪ್ರತಿಯನ್ನು ನಮ್ಮ ಊರಿನ ಹಳ್ಳಿಗಳ ಜನರಿಗೆ ವಾಟ್ಸ್ ಅಪ್ ಮೂಲಕ ರವಾನಿಸಿದ್ದಾರೆ. ಸಚಿವರು ಏತ ನೀರಾವರಿ ಯೋಜನೆಯ ದುರಸ್ತಿಗೆ ಒತ್ತು ನೀಡುವ ಮೂಲಕ ಇಲ್ಲಿನ ಜನರ ಕನಸನ್ನು ನನಸು ಮಾಡಿದ ಹರಿಕಾರ ಎಂದು ಅಭಿನಂದನೆ ಸಲ್ಲಿಸಿದ್ದಾರೆ.