ಶಿವಮೊಗ್ಗ: ನಗರದ ಕಟ್ಟಡ ಪರವಾನಿಗೆ, ಪರವಾನಿಗೆ ಲೋಪದೋಷ, ಕೋಟ್ಯಂತರ ಹಣ ದುರ್ಬಳಕೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದಿಂದ ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಅತಿ ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಆದಾಗಿನಿಂದ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಅತಿ ಎತ್ತರದ ಬಿಲ್ಡಿಂಗ್ಗಳು ತಲೆ ಎತ್ತುತ್ತಿದ್ದು, ಇದರಿಂದ ನಗರದ ದುರ್ಗಿಗುಡಿ, ತಿಲಕ್ ನಗರ, ಬಿ.ಹೆಚ್.ರಸ್ತೆ, ಶಿವಮೂರ್ತಿ ಸರ್ಕಲ್ನಿಂದ ನವುಲೆ ಮುಖ್ಯರಸ್ತೆ, ಕುವೆಂಪು ರಸ್ತೆ ಸೇರಿದಂತೆ ಹಲವೆಡೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವಾಗ ಅಧಿಕಾರಿಗಳು ಲಕ್ಷಾಂತರ ಹಣ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಪರವಾನಿಗೆ ಪಡೆದ ಕಟ್ಟಡಗಳು ನಿಯಮ ಮೀರಿ ಹೆಚ್ಚುವರಿಯಾಗಿ ಕಟ್ಟಡಗಳನ್ನು ಕಟ್ಟುವುದು, ಸೆಟ್ಬ್ಯಾಕ್ ಬಿಡದೇ ನಿಯಮ ಉಲ್ಲಂಘಿಸಿರುವುದು ಇದರಲ್ಲಿ ಸರ್ಕಾರಕ್ಕೆ ಸೇರಿದ ಕಟ್ಟಡಗಳು ಇವೆ. ಚರಂಡಿಗಳ ಮೇಲೆ ಮೆಟ್ಟಿಲುಗಳ ನಿರ್ಮಾಣ ಮಾಡುವುದು, ಬೋರ್ವೆಲ್ ಹಾಗೂ ವಿದ್ಯುತ್ ಟ್ರಾನ್ಸ್ಫಾರಂಗಳನ್ನು ರಸ್ತೆಗಳಲ್ಲಿ ನಿರ್ಮಾಣ ಮಾಡುವುದು, ಪಾರ್ಕಿಂಗ್ ಜಾಗ ಬಿಡದೇ ಇರುವುದು. ಕೆಲವೆಡೆ ಪಾರ್ಕಿಂಗ್ ಜಾಗದಲ್ಲಿ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವುದು, ಬಾಡಿಗೆ ಕೊಡುವುದು ನಡೆಯುತ್ತಿದ್ದು, ಕಟ್ಟಡ ಮಾಲೀಕರು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದರೂ ಅಧಿಕಾರಿಗಳು ಮೌನವಾಗಿರುವುದು, ಸಾರ್ವಜನಿಕರು ದೂರು ನೀಡಿದರೆ ಅದನ್ನೇ ನೆಪಮಾಡಿಕೊಂಡು ಮಾಲೀಕರಿಗೆ ನೋಟೀಸ್ ನೀಡಿ, ಒಂದೊಂದು ಕಟ್ಟಡಕ್ಕೆ ಇಂತಿಷ್ಟು ಹಣ ಎಂದು ವಸೂಲಿ ಮಾಡುವುದು ನಡೆಯುತ್ತಿದ್ದು, ಪಾಲಿಕೆಯಲ್ಲಿ ನಿರಂತರ ಭ್ರಷ್ಟಚಾರ ಮುಂದುವರೆದಿದೆ ಎಂದು ದೂರಿದರು.

ಟ್ರಾಫಿಕ್ ಪೊಲೀಸರು ಈ ಪ್ರಮುಖ ರಸ್ತೆಗಳಲ್ಲಿ ಕಟ್ಟಡ ಮಾಲೀಕರ ತಪ್ಪಿನಿಂದ ಪಾರ್ಕಿಂಗ್ ಜಾಗ ಇಲ್ಲದೇ ಇರುವುದರಿಂದ ಪಾರ್ಕಿಂಗ್ ಮಾಡಿದಲ್ಲಿ ಕೇಸ್ ಹಾಕುತ್ತಿದ್ದಾರೆ. ೨೦೧೪ರಿಂದ ೨೦೨೪ರವರೆಗೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳ ಮತ್ತು ಅವರ ಕುಟುಂಬದ ವಂಶವೃಕ್ಷದಡಿಯಲ್ಲಿ ಮಾಹಿತಿಯನ್ನು ಪಡೆದು ಅಕ್ರಮ ಆಸ್ತಿ ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಎಂ.ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಅಧ್ಯಕ್ಷರಾದ ಕವಿತಾ ರಾಘವೇಂದ್ರ, ಪ್ರಮುಖರಾದ ವಿನಯ್ ತಾಂಡ್ಲೆ, ಜೆ.ಚಂದ್ರಶೇಖರ್, ನವಿನ್, ಅಶ್ರಫ್, ರೂಪ ವಜ್ರಾಲ್ ಮತ್ತಿತರರಿದ್ದರು.