
ಶಿವಮೊಗ್ಗ: ದಾಸೋಹಂ ಸಂಸ್ಥೆಯು ಶಿವಮೊಗ್ಗ ಬಸವಕೇಂದ್ರದಲ್ಲಿ ಮಕ್ಕಳಿಗಾಗಿ ವಿಶೇಷವಾದ ಎರಡನೇ ವರ್ಷದ ಬೇಸಿಗೆ ಶಿಬಿರ ಆಯೋಜಿಸಿದೆ. ಶಿವಮೊಗ್ಗ ವೆಂಕಟೇಶ ನಗರದ ಮೂರನೇ ತಿರುವಿನಲ್ಲಿ ಇರುವ ಬಸವಕೇಂದ್ರದಲ್ಲಿ ಇದೇ ತಿಂಗಳ 12ರಿಂದ 27ರವರೆಗೆ ಈ ಶಿಬಿರ ನಡೆಯಲಿದೆ. ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯಲಿದೆ.

ಮಕ್ಕಳ ಸೃಜನಶೀಲತೆ ಹೆಚ್ಚಿಸುವ ವೈವಿಧ್ಯಮಯ ಚಟುವಟಿಕೆಗಳು ನಡೆಯಲಿವೆ. ಮಕ್ಕಳ ಅಸಕ್ತಿ ಗುರುತಿಸಿ ಅವರನ್ನು ಈ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ.

ನಾಟಕ, ರಂಗಗೀತೆ, ನೃತ್ಯ, ಆಟೋಟಗಳ ಜೊತೆ ಕ್ಲೇ ಮಾಡೆಲಿಂಗ್, ಓರೆಗಾಮಿ, ಮಕ್ಕಳ ಸಿನೆಮಾ ಪ್ರದರ್ಶನ, ಕತೆ, ಒಂದು ದಿನ ಜಲ ವಿಹಾರ, ವನವಿಹಾರ ಆಯೋಜನೆ ಮಾಡಲಾಗಿದೆ. ಈ ಶಿಬಿರದಲ್ಲಿ ಹಿರಿಯ ಕಲಾವಿದರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.
ಹಿರಿಯ ರಂಗಕರ್ಮಿ, ರಂಗಸಮಾಜದ ಮಾಜಿ ಸದಸ್ಯ ಹಾಲಸ್ವಾಮಿ ಆರ್.ಎಸ್. ಶಿಬಿರದ ನಿರ್ದೇಶಕರಾಗಿದ್ದಾರೆ. ನಾಗರತ್ನ, ಚೈತ್ರ ಸಜ್ಜನ್, ಕ್ಲೇ ಮಾಡಲಿಂಗ್ ನ ಬಸವರಾಜ್ ಇನ್ನಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.

15ದಿನಗಳ ಈ ಶಿಬಿರದಲ್ಲಿ ಪ್ರತಿ ನಿತ್ಯ ಮಧ್ಯಾಹ್ನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ವನವಿಹಾರ ಹಾಗೂ ಒಂದು ದಿನ ಜಲವಿಹಾರ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭ ವಿಶೇಷವಾಗಿ ನಡೆಯಲಿದೆ. 3000 ರೂಪಾಯಿ ಶಿಬಿರ ಶುಲ್ಕ ನಿಗದಿ ಮಾಡಲಾಗಿದ್ದು, 50 ಮಕ್ಕಳಿಗೆ ಮಾತ್ರ ಆವಕಾಶವಿದೆ.

ಸರ್ಕಾರಿ ಶಾಲೆ ಮಕ್ಕಳಿಗೂ ಅವಕಾಶ: ನಗರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಈ ಶಿಬಿರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಒಂದು ಶಾಲೆಯಿಂದ ಗರಿಷ್ಠ 5 ಮಕ್ಕಳು ಮುಖ್ಯೋಪಾಧ್ಯಾಯರ ಶಿಫಾರಸ್ಸು ಪತ್ರದೊಂದಿಗೆ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಈ ಮಕ್ಕಳ ಶಿಬಿರ ಶುಲ್ಕವನ್ನು ದಾಸೋಹಃ ಸಂಸ್ಥೆಯು ಪ್ರಾಯೋಜಕರ ಮೂಲಕ ಭರಿಸಲಿದೆ. ಶಿಬಿರದ ಬಗ್ಗೆ ಮಾಹಿತಿಗಾಗಿ ಹಾಗೂ ಮಕ್ಕಳನ್ನು ಸೇರಿಸಲು ಸಂಪರ್ಕಿಸಿ: 9448138183, 9449813763