![kfddd](https://tungataranga.com/wp-content/uploads/2025/02/kfddd-1024x464.jpg)
shimoga ಫೆ.13 ತಾಲ್ಲೂಕುಗಳಲ್ಲಿ ಕೆಎಫ್ಡಿ ಪ್ರಕರಣಗಳು ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಕೆಎಫ್ಡಿ ಕುರಿತು ಜನರಲ್ಲಿರುವ ಭಯ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕೆಂದು ತಹಶೀಲ್ದಾರ್ ವಿ.ಎಸ್.ರಾಜೀವ್ ಸಲಹೆ ನೀಡಿದರು.
ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದ ಭಾಗದಲ್ಲಿ ಪ್ರಕರಣಗಳು ಕಂಡು ಬರುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಜನರನ್ನು ಭಯಮುಕ್ತಗೊಳಿಸಬೇಕು. ಜೊತೆಗೆ ರೋಗ ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಬೇಕು. ಹೆಚ್ಚು ಜನ ಸಂದಣಿ ಹೊಂದಿರುವುದು ಸ್ಥಳದಲ್ಲಿ ಕರಪತ್ರಗಳು, ಪ್ರಕಟಣೆಗಳು, ಭಿತ್ತಿಚಿತ್ರಗಳ ಮೂಲಕ ಕೆಎಫ್ಡಿ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಮಂಗನ ಸಾವಿನಿಂದ ಈ ಕಾಯಿಲೆ ಹರಡಲಿದ್ದು, ತಾಲ್ಲೂಕಿನ ಯಾವುದೇ ಭಾಗದಲ್ಲಿ ಮಂಗನ ಸಾವಾದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅರಣ್ಯ ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡು ವಿಲೇವಾರಿ ಮಾಡುತ್ತದೆ. ಈ ಕಾಯಿಲೆ ಹೆಚ್ಚಾಗಿ ಕಾಡಿನಲ್ಲಿ ಕಂಡುಬರುವುದರಿAದ ಕಾಡಿನ ಕಡೆ ಹೋಗುವುದನ್ನು ಜನರು ಕಡಿಮೆ ಮಾಡಬೇಕು.
![](http://tungataranga.com/wp-content/uploads/2025/02/Screenshot_2025_0208_211945.jpg)
ಡೆಂಗ್ಯೂ ಪ್ರಕರಣ ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಪಂಚಾಯಿತಿಗಳು ಮುನ್ನೆಚರಿಕೆ ಕ್ರಮ ವಹಿಸಬೇಕು. 2024 ರಲ್ಲಿ ತಾಲ್ಲೂಕಿನಲ್ಲಿ ಒಟ್ಟು 268 ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಗ್ರಾಮೀಣ ಭಾಗದಲ್ಲಿ 77, ನಗರದ ಭಾಗದಲ್ಲಿ 191 ಪ್ರಕರಣಗಳು ದಾಖಲಾಗಿದೆ. ಈ ವರ್ಷ ಜನವರಿಯಲ್ಲಿ ಗ್ರಾಮೀಣ ಭಾಗದಲ್ಲಿ 6 ಪ್ರಕರಣಗಳು ಕಂಡು ಬಂದಿದೆ. ಇದರ ಬಗ್ಗೆ ನಾವೆಲ್ಲರೂ ಈಗಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾಗೃತೆಯಿಂದ ಇದ್ದು ಶುಚಿತ್ವವನ್ನು ಕಾಪಾಡಬೇಕು ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ದಢಾರ ಮತ್ತು ರುಬೆಲ್ಲಾ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಲಸಿಕೆ ನೀಡಲಾಗುತ್ತಿದೆ. ತಾಲ್ಲೂಕಿನ ಆರೋಗ್ಯ ಉಪಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಎಮ್ಆರ್ 1 ಲಸಿಕೆಯನ್ನು 9 ರಿಂದ 11 ತಿಂಗಳಿನ ಮಕ್ಕಳಿಗೆ ಮತ್ತು ಎಮ್ ಆರ್ 2 ಲಸಿಕೆಯನ್ನು 16 ರಿಂದ 24 ತಿಂಗಳಿನ ಮಕ್ಕಳಿಗೆ ನೀಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಮಕ್ಕಳನ್ನೂ ಗುರುತಿಸಿ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದರು.
ತಾಲ್ಲೂಕಿನಲ್ಲಿ 2024 ರ ಅಕ್ಟೋಬರ್ ನಿಂದ ಡಿಸೆಂಬರ್ವರೆಗೆ 1124 ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ. ರೇಬಿಸ್ ಕೇವಲ ನಾಯಿ ಕಡಿತದಿಂದ ಮಾತ್ರವಲ್ಲದೆ ಬೆಕ್ಕಿನಿಂದಲೂ ಬರುತ್ತದೆ. ನಾಯಿ ಕಡಿದ ತಕ್ಷಣ ಕಡಿದ ಜಾಗವನ್ನು ಹರಿಯುವ ನೀರಿನಿಂದ ಹಾಗೂ ಡೆಟಾಲ್ ನಿಂದ ತೊಳೆಯಬೇಕು. ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಬೇಕು ಎಂದರು.
ತಾಲ್ಲೂಕಿನಲ್ಲಿ 33 ಟೈಫಾಯ್ಡ್ ಪ್ರಕರಣ ದಾಖಲಾಗಿದ್ದು, ಶುದ್ದ ನೀರನ್ನು ಉಪಯೋಗಿಸಬೇಕು. ಹೊರಗಿನ ಯಾವುದೇ ಆಹಾರವನ್ನು ತಿನ್ನಬಾರದು. ಬೀದಿಬದಿ ವ್ಯಾಪಾರಿಗಳಿಗೆ ಕೂಡ ಈ ಬಗ್ಗೆ ಮಾಹಿತಿ ನೀಡಬೇಕು.
ತಂಬಾಕು ಮುಕ್ತ ಯುವ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು ತ್ರೆöÊಮಾಸಿಕದಲ್ಲಿ ಕೋಟ್ಪಾ ಕಾಯ್ದೆ ಅಡಿಯಲ್ಲಿ 19 ದಾಳಿಗಳು, 424 ಪ್ರಕರಣಗಳು ಹಾಗೂ ರೂ, 39,770 ದಂಡವನ್ನು ಸಂಗ್ರಹಿಸಲಾಗಿದೆ. ಪ್ರತಿ ಶಾಲಾ-ಕಾಲೇಜುಗಳ 100 ಮೀ ಸುತ್ತಮುತ್ತದ ಅಂಗಡಿಯಲ್ಲಿ ದಾಳಿ ನಡೆಸಲಾಗುತ್ತಿದೆ. ಕೋಟ್ಪಾ ಕಾಯ್ದೆ ಕುರಿತು ಜಾಥಾ ಮೂಲಕ ಅರಿವು ಮೂಡಿಸಲಾಗುತ್ತಿದೆ. ಆರ್ಬಿಎಸ್ಕೆ ಕಾರ್ಯಕ್ರಮದಡಿಯಲ್ಲಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ತಪಾಸಣೆ ಕೈಗೊಳ್ಳುತ್ತಿದ್ದು ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತದೆ ಎಂದರು.
ಸಿಡಿಪಿಓ ಸಿ. ಗಂಗಾಬಾಯಿ ಮಾತನಾಡಿ, ನಗರದ ಪ್ರದೇಶದಲ್ಲಿ ಅಂಗವಾಡಿ ಕಟ್ಟಡದ ಸಮಸ್ಯೆ ಕುರಿತು ಮಾಹಿತಿ ತಿಳಿಸಿದರು. ಒಟ್ಟು 163 ಅಂಗನವಾಡಿಗಳಿದ್ದು, ಅದರಲ್ಲಿ 64 ಸ್ವಂತ ಕಟ್ಟಡಗಳಲ್ಲಿವೆ, 11 ನಿವೇಶನಗಳನ್ನು ಗುರುತಿಸಲಾಗಿದೆ. ಇನ್ನೂ 88 ಕೇಂದ್ರಗಳಿಗೆ ನಿವೇಶನ ಬೇಕು. ನಿವೇಶನ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಬೇಕೆಂದು ತಹಶೀಲ್ದಾರ್ರ ಬಳಿ ಮನವಿ ಮಾಡಿದರು.
ಸಭೆಯಲ್ಲಿ ತಾಲ್ಲೂಕಿನ ಕಾರ್ಯನಿರ್ವಾಹ ಅಧಿಕಾರಿ ಅವಿನಾಶ್, ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ಮಂಜುನಾಥ್, ಪಶು ಆಸ್ಪತ್ರೆಯ ವೈದ್ಯರು ಹಾಜರಿದ್ದರು