ಶಿವಮೊಗ್ಗ: ಕಾರ್ಗಲ್ ಟೌನ್ ಕೆನರಾ ಬ್ಯಾಂಕ್ ಎಟಿಎಂನಲ್ಲಿ ವೃದ್ಧನನ್ನು ವಂಚಿಸಿದ್ದ ಆರೋಪಿಗಳನ್ನು ಕಾರ್ಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

2024ರ ಅಕ್ಟೋಬರ್ನಲ್ಲಿ ವೃದ್ಧನ ವಂಚಿಸಿ ಎಟಿಎಂ ಪಿನ್ ಪಡೆದು 1.49 ಲಕ್ಷ ರೂ. ಡ್ರಾ ಮಾಡಿಕೊಂಡಿರುವ ಬಗ್ಗೆ ಕಾರ್ಗಲ್ ಠಾಣೆಯಲ್ಲಿ ಬಿ.ಎನ್.ಎಸ್. ಕಾಯ್ದೆ ರೀತ್ಯ ಪ್ರಕರಣ ದಾಖಲಾಗಿತ್ತು. ಮೇಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಈ ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಸದರಿ ತನಿಖಾ ತಂಡವು ಫೆ. 11ರಂದು ಈ ಪ್ರಕರಣದ ಆರೋಪಿಗಳಾದ ಹರಿಯಾಣದ ಜೋಗಿಂದರ್, ಮುಕೇಶ್ ಅವರನ್ನು ಬಂಧಿಸಿದೆ. ಕಾರ್ಗಲ್ ಮತ್ತು ಶಿರಾಳಕೊಪ್ಪ ಪೊಲೀಸ್ ಠಾಣೆಗಳಲ್ಲಿ ವರದಿಯಾದ ಎರಡು ಎಟಿಎಂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 1 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು 2 ಲಕ್ಷ ರೂ. ಮೌಲ್ಯದ ರಾಯಲ್ ಎನ್ಫೀಲ್ಡ್ ಬೈಕ್ ವಶಪಡಿಸಿಕೊಂಡಿದ್ದಾರೆ.