ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರಿಂದ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ಮಾಡಿರುವ ಘಟನೆ ವರದಿಯಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗಿನ ಜಾವ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾರ್ಗದರ್ಶನದಲ್ಲಿ ನಡೆದಿದೆ.
ರೌಡಿ ಆಸಾಮಿಗಳ ಮನೆಗಳನ್ನು ತಪಾಸಣೆ ನಡೆಸಿ ರೌಡಿ ಆಸಾಮಿಗಳ ಹಾಜರಾತಿ, ಹಾಲಿ ಮಾಡುತ್ತಿರುವ ಕೆಲಸ, ಮನೆಯಲ್ಲಿ ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು* ಇಟ್ಟುಕೊಂಡಿರುವ ಬಗ್ಗೆ ಪರಿಶೀಲಿಸಿ, ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ಎಚ್ಚರಿಕೆ ನೀಡಲಾಗಿದೆ.
ದಾಳಿಯಲ್ಲಿ ಶಿವಮೊಗ್ಗ ಎ ಉಪ ವಿಭಾಗದ ಬಾಬು ಆಂಜನಪ್ಪ, ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗದ ಸುರೇಶ್ ಎಂ, ಪೊಲೀಸ್ ಉಪಾಧಿಕ್ಷಕರು, ಭದ್ರಾವತಿ ಉಪ ವಿಭಾಗದ ನಾಗರಾಜ್, ಪೊಲೀಸ್ ಉಪಾಧಿಕ್ಷಕರು, ಸಾಗರ ಉಪ ವಿಭಾಗದ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್, ಪೊಲೀಸ್ ಉಪಾಧಿಕ್ಷಕರು, ಶಿಕಾರಿಪುರ ಉಪ ವಿಭಾಗದ ಕೇಶವ್, ಪೊಲೀಸ್ ಉಪಾಧಿಕ್ಷಕರು ಮತ್ತು ತೀರ್ಥಹಳ್ಳಿ ಉಪ ವಿಭಾಗದ ಗಜಾನನ ವಾಮನ ಸುತಾರ, ಪೊಲೀಸ್ ಉಪಾಧಿಕ್ಷಕರು ಹಾಗೂ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂಧಿಗಳನ್ನೊಳಗೊಂಡ ಪ್ರತ್ಯೇ ತಂಡಗಳು ಭಾಗವಹಿಸಿದ್ದವು.