ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಹೊಸ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಆಗ್ರಹಿಸಿ ಇಂದಿನಿಂದ ರಾಜ್ಯಾದ್ಯಾಂತ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಾಂತ ಸರ್ಕಾರಿ ಇಲಾಖೆ ಮತ್ತು ಶಾಲಾ ಕಾಲೇಜುಗಳು ಸಿಬ್ಬಂದಿ ಇಲ್ಲದೆ ಬಂದ್ ಆಚರಿಸಿದವು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಶಾಲೆಗಳು, ಜಿಲ್ಲಾ ಪಂಚಾಯತ್ ಕಚೇರಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಆರ್ಟಿಒ ಕಚೇರಿ ಸೇರಿದಂತೆ ಬಹುತೇಕ ಪ್ರಮುಖ ಕಚೇರಿಗಳು ಕಾರ್ಯಾಚರಿಸಲಿಲ್ಲ. ಕೆಲವು ಕಚೇರಿಗಳು ಬೀಗವನ್ನೇ ತೆರೆದಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಆಯುಕ್ತರ ಕಚೇರಿಯೊಂದು ಬಿಟ್ಟರೆ ಉಳಿದ ಎಲ್ಲಾ ವಿಭಾಗಗಳು ಬಾಗಿಲು ಮುಚ್ಚಿದ್ದವು. ಕಂದಾಯ ವಿಭಾಗದ ಸಿಬ್ಬಂದಿಗಳು ಜಗಲಿಯಲ್ಲಿ ಕುಳಿತು ಘೋಷಿತ ಬಂದ್ ಆಚರಿಸಿದರು.

ಸರ್ಕಾರ ನಿನ್ನೆಯಿಂದಲೆ ನೌಕರರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದರೂ ಕೂಡ ಲಿಖಿತ ರೂಪದಲ್ಲೇ ಬೇಡಿಕೆ ಈಡೇರಿಸುವ ಆದೇಶ ನೀಡುವವರೆಗೆ ಕರ್ತವ್ಯಕ್ಕೆ ಗೈರಾಗುವುದಾಗಿ ಬಿಗಿಪಟ್ಟು ಹಿಡಿದ ಹಿನ್ನಲೆಯಲ್ಲಿ ಇಂದು ಬಹುತೇಕ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ಮಧ್ಯಾಹ್ನದ ಹೊತ್ತಿಗೆ ರಾಜಿ ಸಂಧಾನ ಯಶಸ್ವಿಯಾದರೂ ಕೂಡ ಇಂದು ಸಾರ್ವಜನಿಕರಿಗೆ ಸರ್ಕಾರಿ ಸೇವೆ ಸಿಗಲಿಲ್ಲ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಯಿದ್ದು, ಅದು ಶಾಲೆಗಳು ಬಂದ್ ಆಚರಿಸಿದ್ದರಿಂದ ನಡೆದಿಲ್ಲ.

ಕೆಲವು ಖಾಸಗಿ ಶಾಲೆಗಳಲ್ಲಿ ಅವರದ್ದೇ ಆದ ಪ್ರಶ್ನೆ ಪತ್ರಿಕೆಗಳು ನೀಡಿ ಪರೀಕ್ಷೆ ಮಾಡಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ನೌಕರರ ಮುಷ್ಕರ ಯಶಸ್ವಿಯಾಗಿದ್ದು, ಅಂತಿಮವಾಗಿ ಸರ್ಕಾರ ನೌಕರರ ಬೇಡಿಕೆ ಈಡೇರಿಸುವ ಆದೇಶ ಹೊರಡಿಸಿದ್ದು, ಸಾರ್ವಜನಿಕರ ಮೇಲೆ ನೌಕರರ ಮುಷ್ಕರ ಪರಿಣಾಮವಂತು ಬೀರಿದೆ.

ಸರ್ಕಾರಿ ನೌಕರರ ಮುಷ್ಕರಕ್ಕೆ ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆದಿದೆ. ೧೦ ಲಕ್ಷದಷ್ಟು ಸರ್ಕಾರಿ ನೌಕರರು ೬ ಕೋಟಿ ಜನರ ಭಾವನೆಗಳ ಮೇಲೆ ತಮ್ಮ ಬೇಡಿಕೆಯನ್ನು ಹೇರುವುದರ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಆರೋಪವು ಕೇಳಿಬಂತು