ಶಿವಮೊಗ್ಗ : ಹಬ್ಬಗಳು ನಮ್ಮ ಭವ್ಯ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಇಂತಹ ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಅಪಾರ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಅಭಿಮತ ವ್ಯಕ್ತಪಡಿಸಿದರು.

ನಗರದ ರವಿ ಟ್ರೇಡರ್ಸ್ ಅಜಮನಿ ಕುಟುಂಬದವರು ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳಲಾದ ದಾನಮ್ಮ ದೇವಿಯ ವಿಶೇಷ ಪೂಜೆಯಲ್ಲಿ ದಂಪತಿಗಳ ಸಮೇತ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕೇಳಿದ ವರವನ್ನು ಕರುಣಿಸುವ ವಿಶೇಷ ಶಕ್ತಿ ದೇವತೆ ದಾನಮ್ಮ ದೇವಿ ಎಂದು ಅವರು ಸ್ಮರಿಸಿದರು.

ಅಜಮನಿ ಕುಟುಂಬದ ದಾನಮ್ಮ ಅವರು ಮಾತನಾಡಿ, ಶ್ರಾವಣ ಮಾಸದ ಮೊದಲ ವಾರದಲ್ಲಿ ಆಚರಿಸುವ ವ್ರತ ಹಾಗೂ ವಿಶೇಷ ಪೂಜೆಯಿಂದ ಎಲ್ಲರಿಗೂ ಒಳಿತಾಗುತ್ತದೆ. ನಮ್ಮ ಕುಟುಂಬವು ಆರ್ಥಿಕವಾಗಿ ಸದೃಢವಾಗಲು ದೇವಿಯ ಕೃಪೆ ಕಾರಣ ಹಾಗೂ ವ್ರತದ ಮಹಿಮೆ ಅಂತಹದ್ದು. ದಾನಮ್ಮ ದೇವಿಗೆ ಪ್ರತಿ ವರ್ಷ ವಿಯಜಪುರದಿಂದ ಪಾದಾಯಾತ್ರೆಯಲ್ಲಿ ಸಾವಿರಾರು ಭಕ್ತರು ಬರುವುದು ತುಂಬಾ ವಿಶೇಷ ಎಂದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬಿ ಗೌರವಿಸಿ ಹರಸಿದರು. ಶ್ರದ್ಧೆ, ಭಕ್ತಿ ಹಾಗೂ ಶುದ್ಧ ಮನಸ್ಸಿನ ಪ್ರತೀಕವೇ ದಾನಮ್ಮ ದೇವಿಯ ಪೂಜೆಯಾಗಿದೆ ಎಂದು ಭಕ್ತರು ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅಜಮನಿ ಕುಟುಂಬದವರು ಭಕ್ತರಿಗೆ ಅನ್ನ ದಾಸೋಹ ವಿಶೇಷ ಪ್ರಸಾದ ವ್ಯವಸ್ಥೆ ಸೇವೆ ಮಾಡಿದರು. ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸಂಭ್ರಮದಿಂದ ವ್ರತ ಆಚರಿಸಿದರು.
ಈ ಸಂದರ್ಭದಲ್ಲಿ ರವಿ ಟ್ರೇಡರ್ಸ್ ಉಮೇಶ್, ರವಿ, ಜಿ.ವಿಜಯ್ಕುಮಾರ್, ದಾನಮ್ಮ, ಅನಿತಾ, ಬಿಂದು ವಿಜಯ್ ಕುಮಾರ್, ಮಮತಾ, ಸಾವಿತ್ರಿ, ವಾಣಿ, ರೇಖಾ, ರೇಣುಕಾ ಸುಪ್ರಿಯಾ, ಸ್ನೇಹ, ಸಿರಿ, ಮತ್ತಿತರರು ಉಪಸ್ಥಿತರಿದ್ದರು.
ತಲಾತಲಾಂತರಗಳ ಸಂಪ್ರದಾಯ :
ಮಹಾರಾಷ್ಟ್ರದ ಗಡಿಗೆ ಸಮೀಪವಿರುವ ಗುಡ್ಡಾಪುರದಲ್ಲಿ ದಾನಮ್ಮ ದೇವಿಯ ಮುಖ್ಯ ಕ್ಷೇತ್ರವಿದ್ದರೂ, ದೇವಿಗೆ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಾಗಿದ್ದಾರೆ. ಶ್ರಾವಣ ಮಾಸದ ಮೊದಲ ವಾರದಲ್ಲಿ ಆಚರಿಸುವ ಈ ವ್ರತವನ್ನು ರವಿ ಟ್ರೇಡರ್ಸ್ ಅಜಮನಿ ಕುಟುಂಬದವರು ತಲಾತಲಾಂತರಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮುತ್ತಜ್ಜನ ಕಾಲದಿಂದಲೂ ವಿಶೇಷ ಪೂಜೆಯ ಮುಖಾಂತರ ವ್ರತ ಆಚರಣೆ ನಡೆಸುತ್ತಿರುವುದು ಈ ಪೂಜೆಯ ವಿಶೇಷತೆಯಾಗಿದೆ.