
ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲಾಗುವ ನಾಗರ ಪಂಚಮಿ ಧಾರ್ಮಿಕ ನಂಬಿಕೆ, ಪೌರಾಣಿಕ ಕಥೆಗಳು ಹಾಗೂ ಜನಪದ ಸಂಪ್ರದಾಯಗಳ ಸಮ್ಮಿಲನದ ವಿಶಿಷ್ಟ ಹಬ್ಬ ಎನಿಸಿಕೊಂಡಿದೆ. ನಾಗದೇವತೆಯನ್ನು ಆರಾಧಿಸುವ ಮೂಲಕ ಪ್ರಕೃತಿ ಮತ್ತು ಜೀವಸಂಕುಲದ ಮಹತ್ವವನ್ನು ಸ್ಮರಿಸುವ ಈ ಆಚರಣೆ ಹಿಂದಿನಿಂದಲೂ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ.ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳ ಸರಣಿಗೆ ನಾಗರ ಪಂಚಮಿ ಮುನ್ನುಡಿಯಂತಿದ್ದು, ಇದರ ಬಳಿಕ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ ಸೇರಿ ಹಲವು ಹಬ್ಬಗಳು ಸಂಭ್ರಮದಿಂದ ನಡೆಯುತ್ತವೆ. ಕೃಷಿ ಪ್ರಧಾನ ಸಮಾಜದಲ್ಲಿ ಹಾವುಗಳು ಇಲಿ ಹಾಗೂ ಇತರ ಕೀಟಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಅವುಗಳನ್ನು ಪ್ರಕೃತಿಯ ರಕ್ಷಕರೆಂದು ಗೌರವಿಸುವ ಪರಂಪರೆಯೂ ಬೆಳೆದು ಬಂದಿದೆ.

ಕರ್ನಾಟಕದಲ್ಲಿ ನಾಗರ ಪಂಚಮಿಗೆ ವಿಶೇಷ ಜನಪದ ಮಹತ್ವವಿದೆ. ವಿಶೇಷವಾಗಿ ಹೆಣ್ಣುಮಕ್ಕಳು ತವರಿಗೆ ತೆರಳಿ ಹಬ್ಬ ಆಚರಿಸುವುದು, ಸಹೋದರನ ಒಳಿತಿಗಾಗಿ ನಾಗದೇವತೆಯನ್ನು ಪ್ರಾರ್ಥಿಸುವುದು, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಸೇರಿ ಹಲವು ಸಂಪ್ರದಾಯಗಳು ಇಂದಿಗೂ ಜೀವಂತವಾಗಿವೆ. ಹೀಗಾಗಿ ನಾಗರ ಪಂಚಮಿ ಕೇವಲ ನಾಗಾರಾಧನೆಯ ಹಬ್ಬವಾಗಿರದೆ, ನಂಬಿಕೆ, ಪ್ರಕೃತಿ, ಕುಟುಂಬ ಬಾಂಧವ್ಯ ಮತ್ತು ನಮ್ಮ ನೆಲದ ಸಂಸ್ಕೃತಿಯನ್ನು ಒಟ್ಟುಗೂಡಿಸುವ ಹಬ್ಬವಾಗಿಯೂ ಜನಪ್ರಿಯ.

ನಾಗರ ಪಂಚಮಿಯ ಹಿಂದೆ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ಪ್ರಕೃತಿಯೊಂದಿಗಿನ ಮನುಷ್ಯನ ಸಂಬಂಧವೂ ಅಡಗಿದೆ.
ಮುಂಗಾರು ಸಮಯದಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗುವ ಸಂದರ್ಭದಲ್ಲಿ ಹೊಲಗಳಲ್ಲಿ ಇಲಿಗಳು, ಕೀಟಗಳು ಹಾಗೂ ಇತರ ಜೀವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಹಾವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಕೃಷಿಗೆ ಸಹಕಾರಿಯಾಗಿರುವ ನಾಗರನ್ನು ಗೌರವಿಸುವ ಮತ್ತು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿಯೂ ನಾಗಾರಾಧನೆಯನ್ನು ಕಾಣಲಾಗುತ್ತದೆ.

ಕರ್ನಾಟಕದ ಜನಪದ ಸಂಪ್ರದಾಯದಲ್ಲಿ ನಾಗರ ಪಂಚಮಿಯನ್ನು ಹೆಣ್ಣುಮಕ್ಕಳ ವಿಶೇಷ ಹಬ್ಬವೆಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ತವರಿಗೆ ಆಹ್ವಾನಿಸಿ, ಹೊಸ ಬಟ್ಟೆ, ಉಡುಗೊರೆ ನೀಡಿ ಸಂಭ್ರಮಿಸಲಾಗುತ್ತದೆ.
ಸಹೋದರನ ಸುಖ, ಆರೋಗ್ಯ, ಐಶ್ವರ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಸಹೋದರಿಯರು ನಾಗದೇವತೆಯನ್ನು ಪ್ರಾರ್ಥಿಸುವ ನಂಬಿಕೆಯೂ ಇದೆ. ಹೀಗಾಗಿ ಸಹೋದರ-ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿಯೂ ನಾಗರ ಪಂಚಮಿ ಗುರುತಿಸಿಕೊಂಡಿದೆ.
ನಾಗರ ಪಂಚಮಿಗೆ ಸಂಬಂಧಿಸಿದಂತೆ ಹಲವು ಪೌರಾಣಿಕ ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಒಂದರ ಪ್ರಕಾರ, ದೇವಶರ್ಮ ಎಂಬ ಬ್ರಾಹ್ಮಣನಿಗೆ ಎಂಟು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದಳು.

ಒಮ್ಮೆ ಗರುಡನ ಭಯದಿಂದ ಬಂದ ನಾಗರಹಾವು ಆಕೆಯ ಬಳಿ ಆಶ್ರಯ ಪಡೆಯುತ್ತದೆ. ಭಕ್ತಿಯಿಂದ ಆಕೆ ನಾಗನಿಗೆ ಹಾಲು ಮತ್ತು ಹಣ್ಣುಗಳನ್ನು ಅರ್ಪಿಸಿ ಆರಾಧಿಸುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿದ ನಾಗನು ಪ್ರತಿದಿನ ಚಿನ್ನವನ್ನು ನೀಡುತ್ತಿದ್ದನೆಂದು ಕಥೆ ಹೇಳುತ್ತದೆ. ಆದರೆ ಒಂದು ದಿನ ಆಕೆಯ ಸಹೋದರನೊಬ್ಬ ಹೆಚ್ಚಿನ ಚಿನ್ನದ ಆಸೆಯಿಂದ ನಾಗನಿಗೆ ತೊಂದರೆ ನೀಡುತ್ತಾನೆ. ಕೋಪಗೊಂಡ ನಾಗನು ಆತನನ್ನೂ, ಇತರ ಸಹೋದರರನ್ನೂ ಕೊಲ್ಲುತ್ತಾನೆ. ತನ್ನ ಸಹೋದರರ ಸಾವಿಗೆ ತಾನೇ ಕಾರಣಳಾದೆ ಎಂದು ದುಃಖಿತಳಾದ ಆಕೆ ದೇವರನ್ನು ಪ್ರಾರ್ಥಿಸುತ್ತಾಳೆ. ನಂತರ ನಾಗದೇವತೆಯ ಅನುಗ್ರಹದಿಂದ ಆಕೆಯ ಸಹೋದರರು ಪುನರ್ಜೀವ ಪಡೆಯುತ್ತಾರೆ. ಈ ಘಟನೆ ನಡೆದ ದಿನವೇ ನಾಗರ ಪಂಚಮಿಯಾಯಿತು ಎಂಬ ನಂಬಿಕೆಯಿದೆ.

ಮಹಾಭಾರತದ ಕಥೆಯೊಂದಿಗೂ ನಾಗರ ಪಂಚಮಿಗೆ ಸಂಬಂಧವಿದೆ. ರಾಜ ಪರೀಕ್ಷಿತನ ಮರಣಕ್ಕೆ ಸರ್ಪ ಕಾರಣವೆಂದು ತಿಳಿದ ಆತನ ಪುತ್ರ ಜನಮೇಜಯನು ಸರ್ಪಸಂಕುಲವನ್ನು ನಾಶ ಮಾಡಲು ಸರ್ಪಯಜ್ಞ ಆರಂಭಿಸುತ್ತಾನೆ.
ಯಜ್ಞದಲ್ಲಿ ಅನೇಕ ಸರ್ಪಗಳು ಅಗ್ನಿಕುಂಡಕ್ಕೆ ಬೀಳಲಾರಂಭಿಸಿದಾಗ, ಸರ್ಪರಾಜ ವಾಸುಕಿಯ ತಂಗಿ ಜರತ್ಕಾರು ತನ್ನ ಮಗ ಆಸ್ತೀಕನನ್ನು ಯಜ್ಞವನ್ನು ನಿಲ್ಲಿಸುವಂತೆ ಕಳುಹಿಸುತ್ತಾಳೆ. ಆಸ್ತೀಕ ಋಷಿಯ ಮನವಿಗೆ ಸ್ಪಂದಿಸಿದ ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸುತ್ತಾನೆ. ಈ ಘಟನೆ ನಡೆದ ದಿನ ಪಂಚಮಿಯಾಗಿತ್ತು ಎಂಬ ನಂಬಿಕೆಯೂ ನಾಗನಿಗೆ ಕ್ಷೀರಾಭಿಷೇಕ ಯಾಕೆ?
ನಾಗಾರಾಧನೆಯಲ್ಲಿ ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಎಂಬ ಒಂಬತ್ತು ನಾಗರೂಪಗಳನ್ನು ಸ್ಮರಿಸುವ ಸಂಪ್ರದಾಯವಿದೆ. ನಾಗದೇವತೆಯ ಕಲ್ಲಿಗೆ ಹಾಲು, ಅರಿಶಿಣ, ಕುಂಕುಮ ಮುಂತಾದವುಗಳಿಂದ ಪೂಜೆ ಸಲ್ಲಿಸುವ ಪದ್ಧತಿ ಹಲವು ಪ್ರದೇಶಗಳಲ್ಲಿದೆ. ಸರ್ಪಭಯ ಮತ್ತು ವಿಷದ ಅಪಾಯದಿಂದ ರಕ್ಷಣೆ ದೊರೆಯಲಿ ಎಂಬ ಭಕ್ತಿಯ ನಂಬಿಕೆ ಇದರ ಹಿಂದಿದೆ.
ನಾಗಪೂಜೆ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಪುರಾತನ ಸಂಸ್ಕೃತಿಗಳಲ್ಲಿಯೂ ಸರ್ಪವನ್ನು ಶಕ್ತಿ, ರಕ್ಷಣೆ ಮತ್ತು ಫಲವತ್ತತೆಯ ಸಂಕೇತವಾಗಿ ಕಾಣಲಾಗಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ನಾಗಾರಾಧನೆಗೆ ವಿಭಿನ್ನ ರೂಪಗಳಿವೆ. ಕರ್ನಾಟಕ, ಕೇರಳಂ, ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಾಗಪೂಜೆಗೆ ವಿಶೇಷ ಸ್ಥಾನವಿದೆ
ಹಿಂದೂ ಪುರಾಣಗಳಲ್ಲಿ ನಾಗನಿಗೆ ಹಲವು ಪ್ರಮುಖ ಸ್ಥಾನಗಳಿವೆ. ಶಿವನ ಕಂಠದ ಆಭರಣವಾಗಿ, ವಿಷ್ಣುವಿನ ಶೇಷಶಯ್ಯೆಯಾಗಿ, ಗಣಪತಿಯ ಉದರಬಂಧವಾಗಿ ನಾಗ ಕಾಣಿಸಿಕೊಳ್ಳುತ್ತಾನೆ. ಸಮುದ್ರಮಂಥನದ ಸಂದರ್ಭದಲ್ಲಿ ವಾಸುಕಿಯನ್ನು ಹಗ್ಗವಾಗಿ ಬಳಸಿದ ಕಥೆಯೂ ಪ್ರಸಿದ್ಧ.
ಹೀಗಾಗಿ ನಾಗರ ಪಂಚಮಿ ಕೇವಲ ಒಂದು ಹಬ್ಬವಲ್ಲ. ನಾಗಾರಾಧನೆ, ಪ್ರಕೃತಿ ಸಂರಕ್ಷಣೆ, ಕೃಷಿ ಪರಂಪರೆ, ಸಹೋದರ-ಸಹೋದರಿಯರ ಬಾಂಧವ್ಯ ಹಾಗೂ ಪೌರಾಣಿಕ ನಂಬಿಕೆಗಳನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಆಚರಣೆಯಾಗಿದೆ.
ವರದಿ.
ಎಸ್. ಎನ್. ನರಸಿಂಹಸ್ವಾಮಿ. ಶಿಕಾರಿಪುರ.