ಶಿವಮೊಗ್ಗ, ಜುಲೈ 01 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗದವರಿಗೆ ನಿವೇಶನ ಕೊರತೆಯಿಂದಾಗಿ ನಿಗಮದ ವಸತಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಹಿನ್ನೆಲೆ ಗುಂಪು ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಮಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಗಮದ ವಸತಿ ಯೋಜನೆಯಡಿ 2026-27 ನೇ ಸಾಲಿಗೆ ಪರಿಶಿಷ್ಟ ಜಾತಿಗೆ 150 ಮತ್ತು ಪ.ಪಂಗಡಕ್ಕೆ 75 ಗುರಿ ನೀಡಿದ್ದರೂ ಕ್ರಮವಾಗಿ 26 ಮತ್ತು 32 ಸೇರಿ ಒಟ್ಟು 58 ಅರ್ಜಿಗಳು ಮಾತ್ರ ಬಂದಿವೆ. ಇದಕ್ಕೆ ಕಾರಣ ಅನೇಕರಲ್ಲಿ ನಿವೇಶನ ಇಲ್ಲದಿರುವುದು. ಆದ್ದರಿಂದ ಗುಂಪು ಮನೆಗಳನ್ನು ನಿರ್ಮಿಸಿಕೊಟ್ಟರೆ ಜನಾಂಗದವರಿಗೆ ಅನುಕೂಲವಾಗುತ್ತದೆ. ಈ ಕುರಿತು ಸಭಾ ನಡವಳಿಯನ್ನು ಸರ್ಕಾರಕ್ಕೆ ಕಳುಹಿಸಿ ಮುಂದಿನ ಕ್ರಮಕ್ಕೆ ಕೋರಲಾಗುವುದು ಎಂದು ತಿಳಿಸಿದರು.
ನಿಗಮದ ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. 2025-26 ನೇ ಸಾಲಿಗೆ ನಿಗದಿಪಡಿಸಿರುವ ಗುರಿ 3 ಸೇರಿದಂತೆ ಹಿಂದಿನ ವರ್ಷಗಳ ಗುರಿಯನ್ನು ಇನ್ನು 2 ತಿಂಗಳ ಒಳಗೆ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವು ಗ್ರಾಮಗಳಲ್ಲಿ ಅಲೆಮಾರಿ ಜನಾಂಗದವರಿಗೆ ಇ-ಸ್ವತ್ತು ಪಡೆಯಲು ಆಗುತ್ತಿಲ್ಲ. ಅಲ್ಲಿ ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ ಕೈಗೊಂಡು, ಕಂದಾಯ ಗ್ರಾಮವಾಗಿ ಮಾಡಲಾಗುವುದು. ಆಗ ಇ-ಸ್ವತ್ತು ಲಭಿಸಲಿದೆ ಎಂದರು.
ಅಲೆಮಾರಿ ಜನಾಂಗದವರಿಗೆ ಸಿದ್ಲೀಪುರದಲ್ಲಿ ವಸತಿ ನಿರ್ಮಿಸಿಕೊಡಲು 3 ರಿಂದ 5 ಎಕರೆ ಜಾಗ ಮಂಜೂರು ಮಾಡುವಂತೆ ಹಾಗೂ ಸಾಗರ ತಾಲ್ಲೂಕಿನ ಬೆಳ್ಳಳ್ಳಿಯಲ್ಲಿ ನಿವೇಶನಕ್ಕಾಗಿ 3 ಎಕರೆ ಜಾಗ ಗುರುತಿಸಿ ಮಂಜೂರು ಮಾಡುವಂತೆ ನಾಮನಿರ್ದೇಶಿತ ಸದಸ್ಯರು ಕೋರಿದರು.

ಹಾಗೂ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಅಲೆಮಾರಿ ಜನಾಂಗದವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು, ಅನುಕೂಲಗಳು ದೊರಕುತ್ತಿಲ್ಲ. ಈ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಮತ್ತು ನಿಗಮದ ವಿವಿಧ ಯೋಜನೆಗಳಗಡಿ ನಿಗದಿಪಡಿಸಿರುವ ಗುರಿಗಳ ಸಂಖ್ಯೆ ಕಡಿಮೆ ಇದ್ದು, ಇದನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು, ಸಂಬAಧಿಸಿದ ಅಧಿಕಾರಿಗಳು ಅಲೆಮಾರಿ ಜನಾಂಗದವರಿಗೆ ಅಗತ್ಯವಾದ ನಿವೇಶನ ಹಂಚಿಕೆ ಮಾಡುವ ಸಂಬAಧ ಪರಿಶೀಲಿಸಿ, ಶೀಘ್ರದಲ್ಲಿ ಜಾಗ ಗುರುತಿಸುವಂತೆ ಸೂಚನೆ ನೀಡಿದ ಅವರು ಅರಣ್ಯ ಭೂಮಿಯಲ್ಲಿನ ಮನೆಗಳಿಗೆ ಹಕ್ಕುಪತ್ರ ನೀಡಲು ಜಿ.ಪಂ ಸಮಿತಿ ಇರಬೇಕು. ಈಗ ಸಮಿತಿ ಇಲ್ಲದ ಕಾರಣ, ಸಮಿತಿ ರಚನೆಯಾದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಸ್ವಯಂ ಉದ್ಯೋಗ ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ, ಗಂಗಾ ಕಲ್ಯಾಣ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಾಮರ್ಶಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ತೋರದೆ ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ-1, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯರಾದ ಮಾರುತಿ, ಅಶೋಕ್, ಬಸವೇಶ್ವರ, ಸಂದೀಪ್ ಉಪಸ್ಥಿತರಿದ್ದರು.–