ಶಿವಮೊಗ್ಗ : ಶಾಂತಿನಗರದ ಖಾಸಗಿ ಸಿಟಿಬಸ್ಸುಗಳನ್ನು ನಿಷೇಧಿಸಿ ಇತ್ತೀಚೆಗೆ ಖಾಸಗಿ ಬಸ್ಸಿಗೆ ಸಿಲುಕಿ ಮೃತಪಟ್ಟವನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ಇಂದು ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಶಾಂತಿನಗರ ಭಾಗದಲ್ಲಿ ಸಂಚರಿಸುವ ಖಾಸಗಿ ನಗರ ಸಾರಿಗೆ ಬಸ್ಸುಗಳು ಸಾರ್ವಜನಿಕರಿಗೆ ಯಮಸ್ವರೂಪಿಯಾಗಿ ಪರಿಣಮಿಸಿದ್ದು, ಇದರಲ್ಲಿ ಕಾರ್ಯನಿರ್ವಹಿಸಿದ್ದು, ಕಾರ್ಮಿಕರ ವರ್ತನೆಯೂ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡಿದ್ದು ನ.16ರಂದು ನಡೆದ ಅಪಘಾತ, ಖಾಸಗಿ ಬಸ್ಸುಗಳ ಅಟ್ಟಹಾಸಕ್ಕೆ ಸಾಕ್ಷಿಯಾಗಿದ್ದು, ಈ ಘಟನೆಯಲ್ಲಿ ಶಾಂತಿನಗರದ ಯುವಕ ತನ್ನ ಜೀವವನ್ನು ಕಳೆದುಕೊಂಡಿದ್ದು, ಇನ್ನಷ್ಟು ಅಮಾಯಕ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಗೆ ಖಾಸಗಿ ಸಿಟಿಬಸ್ಸುಗಳ ಬೇಜವಾವ್ದಾರಿತನ ಎಷ್ಟು ಕಾರಣವೋ ಪ್ರೈಓವರ್ ಬಳಿ ರಸ್ತೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಅಷ್ಟೇ ಕಾರಣರಾಗಿದ್ದಾರೆ. ಮೃತ ಅಹಮದ್ ಆಟೋಚಾಲಕನಾಗಿದ್ದು ಆತನ ಬಡಕುಟುಂಬ ಆತನ ದುಡಿಮೆಯನ್ನೇ ಅವಲಂಭಿಸಿತ್ತು. ಈ ಕುಟುಂಬ ಈಗ ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣವೇ ಬಸ್ಸು ಮಾಲೀಕರಿಂದ ಮತ್ತು ಗುತ್ತಿಗೆದಾರರಿಂದ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಹಾಗೂ ಶಾಂತಿನಗರಕ್ಕೆ ಖಾಸಗಿ ಸಾರಿಗೆ ಬಸ್ಸು ನಿಷೇಧಿಸಿ, ಸರ್ಕಾರಿ ನಗರಸಾರಿಗೆ ಬಸ್ಸುಗಳ ಸೇವೆಯನ್ನು ಕಲ್ಪಿಸಬೇಕು. ಇನ್ನು ಮುಂದೆ ಈ ರೀತಿಯ ಘಟನೆ ನಡೆಯದಂತೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಶಾಂತಿನಗರ ನಿವಾಸಿಗಳು ಮನವಿ ಮಾಡಿದ್ದಾರೆ.

ಮನವಿ ನೀಡುವ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಸೈಯದ್ ಮುಜೀಬುಲ್ಲಾ, ರಾಮು, ನಾಸೀರ್ವುದ್ದೀನ್, ಫಯಾಜ್ಖಾನ್, ಅಬ್ರಾರ್, ಪ್ರಸನ್ನ, ಜಬೀವುಲ್ಲಾ, ರಿಜ್ವಾನ್, ಅನ್ವರ್ ಮತ್ತಿತರರಿದ್ದರು.