ಶಿವಮೊಗ್ಗ : ನಗರದಲ್ಲಿ ಆಹಾರ ನಾಗರೀಕ ಸರಬರಾಜು ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೆಎಫ್ಸಿಐ ಮತ್ತು ಎಫ್ಸಿಐ ಗೋದಾಮುಗಳಿಗೆ ದಿಢೀರ್ ದಾಳಿನಡೆಸಿ, ವೇಬ್ರಿಡ್ಜ್ಗಳ ತಪಾಸಣೆ ನಡೆಸಿ ತೂಕದಲ್ಲಿ ವ್ಯತ್ಯಾಸವಿದ್ದ ಕಾರಣ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ.
ಇತ್ತೀಚೆಗೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ನಗರಕ್ಕೆ ಬಂದಾಗ, ಈ ಬಗ್ಗೆ ಮಾಹಿತಿ ನೀಡಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಪಡಿತರ ಅಕ್ಕಿ ಸಂಗ್ರಹದ ಗೋದಾಮುಗಳಿಗೆ ಭೇಟಿನೀಡಿ, ತೂಕದಲ್ಲಿನ ವ್ಯತ್ಯಾಸಗಳನ್ನು ಮತ್ತು ಅಕ್ಕಿಯ ಗುಣಮಟ್ಟವನ್ನು ಪರಿಶೀಲಿಸಲು ಮತ್ತು ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡ ರಚನೆಯಾಗಿದ್ದು, ನಿನ್ನೆ ಮಾಚೇನಹಳ್ಳಿಯ ವೇಬ್ರಿಡ್ಜ್ ಮತ್ತು ಗಾಡಿಕೊಪ್ಪದ ಎಫ್ಸಿಐ ಗೋದಾಮು ಬಳಿ ಇರುವ ವೇಬ್ರಿಡ್ಜ್ ಹಾಗೂ ಭದ್ರಾವತಿ ಎಫ್ಸಿಐ ಗೋದಾಮುಗಳಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ತೂಕದಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿದ್ದಾರೆ. ೩೦ಟನ್ ತೂಕದಲ್ಲಿ ಸರಾಸರಿ ೧ಕ್ವಿಂಟಾಲ್ ವ್ಯತ್ಯಾಸವಿರುವುದು ಕಂಡು ಬಂದಿದೆ. ಮೈಸೂರಿನಿಂದ ಪರಿಶೀಲನೆಗಾಗಿಯೇ ವಿಶೇಷ ವಾಹನ ಬಂದಿದ್ದು, ಇದರ ಮೂಲಕ ತೂಕದಲ್ಲಿನ ವ್ಯತ್ಯಾಸವನ್ನು ಕಂಡು ಹಿಡಿಯಬಹುದಾಗಿದೆ. ಹಾಗೂ ಇಲಾಖೆಯ ಅಧಿಕಾರಿಗಳು ತಕ್ಷಣ ಅದನ್ನು ಸರಿಪಡಿಸಿ ಸ್ಥಳದಲ್ಲೇ ತಲಾ ೧೦ ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ ಮತ್ತು ಅವರಿಗೆ ನೋಟೀಸ್ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರಾದ ಅವಿನ್, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಧನಲಕ್ಷ್ಮೀ, ನಿರೀಕ್ಷಕರಾದ ಶ್ರೀನಿವಾಸ್, ಎಫ್ಸಿಐ ಡಿಪೋ ಮ್ಯಾನೇಜರ್ ರವಿಕುಮಾರ್, ವೇಬ್ರಿಡ್ಜ್ ತಜ್ಞ ಪ್ರಸಾದ್ ಹಾಗೂ ಎರಡೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.