ಶಿವಮೊಗ್ಗ,ನ.07:
ಬದುಕು ಇರುವುದು ಸವಿಯಲು. ಸವೆಯಲು. ಬದುಕನ್ನು ಸಂಭ್ರಮಿಸಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜು, ಐಕ್ಯೂಎಸಿ, ಸಹ್ಯಾದ್ರಿ ಕಲಾ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಸಹ್ಯಾದ್ರಿ ಕಲಾ ಪರಿಷತ್ ಕಲಾ ಪರ್ವ 2025-26’ ಅನ್ನು ಉದ್ಘಾಟಿಸಿ ಮಾತನಾಡಿದರು.
ಸಾಧನೆ ಇಲ್ಲದ ಬದುಕು ನಿರಾರ್ಥಕ. ನಾವು ಸತ್ತಂತೆ ಬದುಕಬಾರದು. ಸತ್ತ ಮೇಲೂ ಬದುಕುವಂತೆ ಜೀವಿಸಬೇಕು. ಬದುಕನ್ನು ಬೆಳೆಯಲು ಬಿಡಬೇಕೇ ಹೊರತೂ ಕೊಳೆಯಲು ಅಲ್ಲ. ಸಮಾಜದಲ್ಲಿ ನಗೆಯ ಹಂಚಬೇಕೇ ಹೊರೂ ಹಗೆಯ ಸಾಧಿಸುವುದಲ್ಲ. ದೊಡ್ಡ ಕನಸುಗಳನ್ನು ಇಟ್ಟುಕೊಳ್ಳಿ. ಉದ್ಯೋಗ ಮಾಡುವುದೇ ಮುಖ್ಯವಲ್ಲ. ಉದ್ಯೋಗ ಸೃಷ್ಟಿಸುವಂತೆ ಬೆಳೆಯುವುದು ಮುಖ್ಯ ಎಂದರು.
ಕನ್ನಡ ಭಾಷೆಯೇ ಶ್ರೇಷ್ಠ. ಇಂದು ಜಗತ್ತಿನಲ್ಲಿ ಸಾವಿರಾರು ಭಾಷೆಗಳು ಅಳಿವಿನಂಚಿನಲ್ಲಿವೆ. ಆದರೆ ಕನ್ನಡ ಭಾಷೆ ಮಾತ್ರ ಬೆಳೆಯುತ್ತಲೇ ಇದೆ. ಅದರಕ್ಕೆ ಕಾರಣ ಅದರ ಬೇರುಗಳು ಗಟ್ಟಿಯಾಗಿವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಕೂಡ ಸಿಕ್ಕಿದೆ. ವಚನಗಳು ಜನಪದ, ಮುಂತಾದವು ಭಾಷೆಯ ಮಹತ್ವವನ್ನು ಹೆಚ್ಚಿಸಿವೆ. ಕುವೆಂಪು, ಬೇಂದ್ರೆ, ಮಾಸ್ತಿ, ಡಿವಿಜಿಯಂತಹ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಹಾಗಾಗಿ ಕನ್ನಡ ಭಾಷೆಗೆ ಸಾವಿಲ್ಲ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಹ್ಯಾದ್ರಿ ಕಲಾ ಕಾಲೇಜ್ ಎಂದರೆ ಅದು ಸಾಂಸ್ಕೃತಿಕ ತವರುಮನೆ. ಸಹ್ಯಾದ್ರಿ ಕಲಾ ಪರಿಷತ್ ಇಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇವೆ ಎಂದರಲ್ಲದೇ ಕಲಾ ಪರಿಷತ್ ನ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಖ್ಯಾತ ರಂಗ ಕಲಾವಿದೆ ಅಕ್ಷತಾ ಪಾಂಡವಪುರ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಪ್ರಾಚಾರ್ಯ ಡಾ. ಎಸ್. ಸಿರಾಜ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುವೆಂಪು ಪರೀಕ್ಷಾಂಗ ಕುಲಸಚಿವ ಪ್ರೊ.ತಿಮ್ಮರಾಯಪ್ಪ, ಪ್ರಾಧ್ಯಾಪಕರಾದ ಡಾ. ಮಹದೇವಸ್ವಾಮಿ, ಡಾ. ಚಂದ್ರಪ್ಪ, ಐಕ್ಯೂಎಸಿ ಸಂಚಾಲಕ ಡಾ.ಮಂಜುನಾಥ್ ಹೆಚ್.ಪಿ., ಯುವ ರೆಡ್ಕ್ರಾಸ್ ಸಂಚಾಲಕಿ ಶ್ವೇತಾಶ್ರೀ, ರೋವರ್ಸ್ ಘಟಕದ ಸಂಚಾಲಕ ಸಂತೋಷ್ ಬಿ.ಜೆ., ರೇಂಜರ್ಸ್ ಘಟಕದ ಸಂಚಾಲಕಿ ಡಾ. ಗಿರಿಜಮ್ಮ, ಕಲಾ ಪರಿಷತ್ ಉಪಾಧ್ಯಕ್ಷ ಬಿ.ಹೆಚ್. ಕರಿಬಸಪ್ಪ ಸೇರಿದಂತೆ ಹಲವರಿದ್ದರು.
ಪ್ರಣತಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಅನಿಲ್ ಅವರನ್ನು ಸನ್ಮಾನಿಸಲಾಯಿತು.