ಶಿವಮೊಗ್ಗ : ಕೋಟೆ ರಸ್ತೆಯಲ್ಲಿರುವ ಆಚಾರ್ಯತ್ರಯ ಭವನಕ್ಕೆ ನಾಳೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಗಮಿಸಿ, ಅನುಗ್ರಹಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಚಾರ್ಯತ್ರಯ ಭವನವು ನಾನು ಶಾಸಕನಾಗಿದ್ದಾಗ ಮಂಜೂರು ಮಾಡಿಸಿದ್ದೆ. ೨೫-೦೫-೨೦೧೬ರಲ್ಲಿ ಇದರ ಭೂಮಿಪೂಜೆ ನೇರವೇರಿತ್ತು. ನಂತರ

೮-೨-೨೦೨೩ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆನ್ಲೈನ್ ಮೂಲಕ ಉದ್ಘಾಟನೆ ಮಾಡಿದ್ದರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷ ವಹಿಸಿದ್ದರು. ಅದಾದ ನಂತರ ಈ ಭವನಕ್ಕೆ ಯಾವುದೇ ಯತಿಗಳು ಬಂದಿರಲಿಲ್ಲ. ಭವನವು ಒಂದು ರೀತಿಯಲ್ಲಿ ಮಂದಗತಿಯನ್ನು ನಡೆಯುತ್ತಿತ್ತು. ಈಗ ಇದಕ್ಕೊಂದು ಹೊಸರೂಪ ನೀಡುವ ಹಿನ್ನಲೆಯಲ್ಲಿ ಶೃಂಗೇರಿ ಶ್ರೀಗಳು ಪಾದಸ್ಪರ್ಶವನ್ನು ಮಾಡುತ್ತಿದ್ದಾರೆ ಎಂದರು.

ಆಗಮಿಕ ವಿದ್ವಾನ್ ಶಂಕರಾನಂದ ಜೋಯ್ಸ್ ಮಾತನಾಡಿ, ಶೃಂಗೇರಿ ಶ್ರೀಗಳು ಅಂದು ಮಧ್ಯಾಹ್ನ ೧೨ ಗಂಟೆಗೆ ಪುರ ಪ್ರವೇಶ ಮಾಡಲಿದ್ದಾರೆ. ಅವರನ್ನು ಹೊಳೆಬಸ್ಸ್ಟಾಪ್ನಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ನಂತರ ವಾಹನಗಳ ಮೂಲಕ ಶೋಭಾಯಾತ್ರೆ ನಡೆಸಲಾಗುವುದು. ಅವರು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಭಕ್ತರನ್ನು ಅನುಗ್ರಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಚಾರ್ಯತ್ರಯ ಭವನಕ್ಕೂ ಚಿತ್ತೈಸುತ್ತಾರೆ. ಆಸ್ತಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಗದ್ಗುರುಗಳವರ ಅನುಗ್ರಹವನ್ನು ಪಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಕೆಬಿಎಂಎಸ್ನ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪ್ರತಿನಿಧಿ ಎಂ.ರಘುರಾಮ್, ಮುಖಂಡರಾದ ಎಂ.ಶಂಕರ್, ರಾಘವೇಂದ್ರ ಉಡುಪ, ಪ್ರಕಾಶ್ಭಟ್, ರವಿಶಂಕರ್, ಅನಂತ್ ಜಿ.ಎಸ್., ಮಧುಮತಿ, ಶ್ರೀಕಾಂತ್ ಇದ್ದರು.