ಶಿವಮೊಗ್ಗ : ಧರ್ಮಸ್ಥಳದ ಇಡೀ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ(ಎನ್ಐಎ)ಕ್ಕೆ ವಹಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಅನುಮಾನಗಳು, ಗೊಂದಲಗಳು ಈಗ ಕೊನೆಗೊಂಡಿವೆ. ಇದರ ಹಿಂದೆ ಷಡ್ಯಂತ್ರ ಇದ್ದದ್ದು ಈಗ ಬಯಲಾಗಿದೆ. ಬುರುಡೆಗಳ ಮುಖವಾಡಗಳೆಲ್ಲಾ ಕಳಚಿಬಿದ್ದಿವೆ. ಪಾತ್ರಧಾರಿಗಳೆಲ್ಲಾ ಪತ್ತೆಯಾಗಿದ್ದಾರೆ. ಈಗ ಸೂತ್ರಧಾರಗಳನ್ನು ಪತ್ತೆಹಚ್ಚಬೇಕಾಗಿದೆ. ಧರ್ಮಸ್ಥಳಕ್ಕೆ ಹಿಂದೂ ಧರ್ಮಕ್ಕೆ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಕೆಟ್ಟ ಹೆಸರು ತರಬೇಕೆಂಬ ಕೊಳಕು ನಿರ್ಧಾರಗಳೆಲ್ಲಾ ಕಳಚಿಬಿದ್ದಿವೆ. ಎಸ್ಐಟಿ ತನಿಖಾ ದಳ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ ಇದೊಂದು ರಾಷ್ಟ್ರಮಟ್ಟದ ಸುದ್ದಿಯಾಗಿದ್ದರಿಂದ ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕೆಲವು ಸಂಘಟನೆಗಳ ಪಿತೂರಿಯೂ ಇರುವ ಶಂಕೆ ಇರುವುದರಿಂದ ಇದನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಬುರುಡೆ ಗ್ಯಾಂಗಿನ ಮುಖ್ಯಸ್ಥ ಚಿನ್ನಯ್ಯ, ಸೂತ್ರಧಾರಿಗಳು ಎನ್ನಬಹುದಾದ ಗಿರೀಶ್ ಮಟ್ಟಣ್ನವರ್, ಜಯಂತ್ ಯೂಟ್ಯೂಬರ್ ಎಂ.ಡಿ. ಸಮೀರ್, ತಿಮ್ಮಾರೋಡಿ ಸೇರಿದಂತೆ ಅನೇಕರು ಇದರ ಹಿಂದಿದ್ದಾರೆ. ಈಗಾಗಲೇ ಇವರೆಲ್ಲರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಆದರೆ ಇಷ್ಟೇ ಸಾಲದು ಇವರು ಪಾತ್ರಧಾರಿಗಳು ಇದರ ಹಿಂದೆ ಸೂತ್ರಧಾರಿಗಳಿದ್ದಾರೆ ಅವರನ್ನೂ ಪತ್ತೆ ಹಚ್ಚಬೇಕಾಗಿದೆ ಇವರೆಲ್ಲರನ್ನೂ ಮೌಖಿಕವಾಗಿಯೇ ಬಂಧಿಸಲಾಗಿದೆ. ಆದರೆ ಅಧಿಕೃತವಾಗಿ ಬಂಧಿಸಿ ಅವರಿಗೆ ಒದ್ದು ಸತ್ಯವನ್ನು ಬಾಯಿಬಿಡಿಸಬೇಕು ಎಂದರು.

ಕೆಲವು ರಾಷ್ಟ್ರದ್ರೋಹಿಗಳ ಸಂಘಟನೆಗಳು ಈ ಷಡ್ಯಂತ್ರದ ಹಿಂದೆ ಇವೆ. ಎಸ್ಡಿಪಿಐಗೂ ಧರ್ಮಸ್ಥಳಕ್ಕೂ ಏನು ಸಂಬಂಧ ಶ್ರೀಕ್ಷೇತ್ರವನ್ನು ಅಪವಿತ್ರಗೊಳಿಸುವ ಹುನ್ನಾರವಿದು. ಇವರಿಗೆಲ್ಲಾ ಹಣ ಎಲ್ಲಿಂದ ಬಂತು ಕಾಂಗ್ರೆಸ್ ಪಕ್ಷದವರೇ ರಾಷ್ಟ್ರೀಯ ತನಿಖಾದಳದಿಂದ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಸಂಪೂರ್ಣ ನ್ಯಾಯ ಸಿಗಬೇಕು ಎಂದರೆ ಎನ್ಐಎಗೆ ವರ್ಗಾಯಿಸಬೇಕಾಗುತ್ತದೆ. ಎಸ್ಐಟಿ ಕೊನೇಪಕ್ಷದ ಮಧ್ಯಂತರ ವರದಿಯನ್ನೂ ಕೂಡ ನೀಡಿಲ್ಲ ಎಂದ ಅವರು, ಈ ಎಲ್ಲಾ ಸುಳ್ಳು ಆರೋಪಿಗಳನ್ನು ಮಂಪರು ಪರೀಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಭಕ್ತ ಬಳಗದ ಕೆ.ಈ. ಕಾಂತೇಶ್ ಮಾತನಾಡಿ, ಬುರುಡೆ ಗ್ಯಾಂಗಿನಿಂದ ಧರ್ಮಸ್ಥಳವೇ ಅಶುದ್ಧಗೊಂಡಿದೆ. ಆದ್ದರಿಂದ ರಾಷ್ಟ್ರಭಕ್ತ ಬಳಗ ಹಾಗೂ ಧರ್ಮಸ್ಥಳ ಭಕ್ತರಿಂದ ಸೆ.೨ರಂದು ಗಂಗೆ-ತುಂಗೆಯರ ತೀರ್ಥ ತೆಗೆದುಕೊಂಡು ಇಡೀ ಧರ್ಮಸ್ಥಳದ ಬೀದಿಗಳಲ್ಲಿ ಪ್ರೋಕ್ಷಣೆ ಮಾಡಿ, ಶುದ್ಧೀಕರಣಗೊಳಿಸಲಾಗುವುದು, ಸೆ.೨ರ ಬೆಳಿಗ್ಗೆ ೮ ಗಂಟೆಗೆ ನಮ್ಮ ಮನೆಯಿಂದ ನೂರಾರು ವಾಹನಗಳಲ್ಲಿ ತೆರೆಯುತ್ತಿದ್ದೇವೆ ಎಂದರು.
ಗಂಗೆ-ತುಂಗೆಯರ ನದಿ ನೀರು ಮಾತ್ರವೇ ನೇತ್ರಾವತಿ ನೀರು ಬೇಡವೇ ಪತ್ರಕರ್ತರ ಪ್ರಶ್ನೆಗೆ ಅದನ್ನೂ ಕೂಡ ಸೇರಿಸಿ ತೆಗೆದುಕೊಂಡು ಹೋಗಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರೀ, ಈ. ವಿಶ್ವಾಸ್, ಬಾಲು, ಜಾದವ್, ಕಾಚೀನಕಟ್ಟೆ ಸತ್ಯನಾರಾಯಣ, ಲೋಕೇಶ್, ವಾಗೀಶ್, ಕುಬೇರ, ಮೋಹನ್, ಶಿವಾಜಿ ಸೇರಿದಂತೆ ಹಲವರು ಇದ್ದರು.