ಶಿವಮೊಗ್ಗ : ಧರ್ಮಸ್ಥಳ ಪ್ರಕರಣದಲ್ಲಿ ಇಡೀ ಹಿಂದೂ ಸಮಾಜಕ್ಕೆ ಅಪಮಾನವಾಗುವಂತೆ ನಡೆದುಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿದ್ದಾನೆ. ಹೆಣ ಹೂತು ಹಾಕಲಾಗಿದೆ ಎಂದು ಧರ್ಮಸ್ಥಳಕ್ಕೆ, ವೀರೇಂದ್ರ ಹೆಗ್ಗಡೆಯವರಿಗೆ, ಹಿಂದೂ ಸಮಾಜಕ್ಕೆ ಹಾಗೂ ಇಡೀ ಭಕ್ತರಿಗೆ ಅಪಮಾನ ಮಾಡಲಾಗಿದೆ. ಧರ್ಮಸ್ಥಳ ಪ್ರಕರಣದಲ್ಲಿ ದುಷ್ಟ ಶಕ್ತಿ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಎಂದರು.

ರಾಜ್ಯ ಸರ್ಕಾರ ಯಾರ ಮಾತು ಕೇಳಿ ಎಸ್.ಐ.ಟಿ. ರಚನೆ ಮಾಡಿದೆ ಎಂದು ಗೊತ್ತಿಲ್ಲ. ಆದರೆ ಎಸ್.ಐ.ಟಿ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಎಸ್.ಐ.ಟಿ. ತನಿಖೆಯಿಂದ ಇಡೀ ಸಮಾಜಕ್ಕೆ ನ್ಯಾಯ ಸಿಗಬೇಕು, ವಿರೇಂದ್ರ ಹೆಗಡೆ ಕುಟುಂಬಕ್ಕೆ, ಹಿಂದೂ ಸಮಾಜಕ್ಕೆ ನ್ಯಾಯ ಸಿಗಬೇಕು. ಅನಾಮಿಕ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಮತ್ತು ತನಿಖೆ ಮೂಲಕ ಭಕ್ತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಅನಾಮಿಕ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಇಟ್ಟುಕೊಂಡು ತನಿಖೆ ನಡೆಸಿದರೆ ಎಲ್ಲವೂ ಹೊರಬರಲಿದೆ. ಅನಾಮಿಕನನ್ನು ಅರೆಸ್ಟ್ ಮಾಡಿ ತನಿಖೆ ನಡೆಸಿದರೆ ಎಲ್ಲವೂ ಹೊರಬರಲಿದೆ. ಆದಷ್ಟು ಸತ್ಯ ಆತನಿಂದಲೇ ಹೊರಬರಲಿದೆ. ಎಡಪಂಥಿಯರು ಮಾಡಿರುವ ಷಡ್ಯಂತ್ರ ಇದಾಗಿದೆ.

ಅನಾಮಿಕನ ಹಿಂದೆ ಯಾರು ಯಾರಿದ್ದಾರೆ ಎಂದು ತನಿಖೆ ನಡೆಸಬೇಕು. ವಿದೇಶಿ ಹಣ ಇದರಲ್ಲಿ ಹೂಡಿಕೆಯಾಗಿದಿಯಾ ಎಂಬ ಅನುಮಾನ ಕಾಡುತ್ತಿದೆ. ಅನಾಮಿಕ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಿದಾಗ ಎಲ್ಲ ಸತ್ಯವೂ ಹೊರಬರಲಿದೆ ಎಂದು ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.