ಶಿವಮೊಗ್ಗ:‘ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹೊಸ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡುತ್ತಿರುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷಗಳ ಸಂಖ್ಯೆ ಅಧಿಕವಾಗಿ ಆಟೋ ಚಾಲಕರ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಇದೇ ಕಾರಣಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ನೀಡುತ್ತಿದ್ದ ಪರವಾನಿಗೆಯನ್ನು ಈ ಹಿಂದಿನ ಜಿಲ್ಲಾಧಿಕಾರಿ ಸ್ಥಗಿತಗೊಳಿಸಿದ್ದರು. 2024ರಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಇಲಾಖೆಯಿಂದ ನೋಂದಣಿಗೊಂಡು ಪರವಾನಿಗೆ ಇಲ್ಲದೇ ಚಲಾಯಿಸುತ್ತಿದ್ದ 273 ಆಟೋರಿಕ್ಷಗಳಿಗೆ ಮಾತ್ರ ಪರವಾನಿಗೆ ನೀಡುವಂತೆ ಸಭೆಯಲ್ಲಿ ಅನುಮೋದಿಸಲಾಗಿತ್ತು ಎಂದು ತಿಳಿಸಿದ್ದಾರೆ.


ಪ್ರಾದೇಶಿಕ ಸಾರಿಗೆ ಇಲಾಖೆಯು 2024 ರಿಂದ ಇಲ್ಲಿಯವರೆಗೆ ಹೊಸ ಆಟೋರಿಕ್ಷಾಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪರವಾನಿಗೆ ನೀಡಿದ ಕಾರಣ ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷಗಳ ಸಂಖ್ಯೆಯು ಅಧಿಕಗೊಂಡು ಬೇಡಿಕೆ ಮತ್ತು ಪೂರೈಕೆಯ ವ್ಯತ್ಯಾಸ ಉಂಟಾಗಿದ್ದು, ಆಟೋ ಚಾಲಕರಿಗೆ ದಿನನಿತ್ಯದ ದುಡಿಮೆಯ ಪ್ರಮಾಣವು ಕಡಿಮೆಯಾಗಿ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ ಎಂದು ದೂರಿದರು.

ಬ್ಯಾಂಕುಗಳಿಂದ ಮತ್ತು ಫೈನಾನ್ಸ್ ಗಳಿಂದ ಪಡೆದಂತಹ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಲಾಗದೆ, ಸಾಕಷ್ಟು ಆಟೋ ರಿಕ್ಷಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಿಲ್ಲಾಡಳಿತವು ಆಟೋ ಚಾಲಕರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್, ಗೌರ ಅಧ್ಯಕ್ಷ ಅನ್ಸರ್, ಆಲ್ಲಾ ಬಕಾಷ್, ಪ್ರಶಾಂತ್, ಇಕ್ಬಾಲ್ ಇದ್ದರು.