ಶಿವಮೊಗ್ಗ: ತಾಳಗುಪ್ಪ ದಿಂದ ಮೈಸೂರು ರೈಲು ಬೋಗಿಗಳ ನಡುವಿನ ಲಿಂಕ್ ಕಟ್ಟಾಗಿ, ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿಯಲ್ಲಿ ಸಂಭವಿಸಿದ್ದು, ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ.


ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.

ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಇವತ್ತು ಬೋಗಿಗಳು ಬೇರ್ಪಟ್ಟರೂ ಯಾವುದೇ ಅಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ರೈಲ್ವೆ ಬೋಗಿಗಳು ಬೇರ್ಪಟ್ಟ ಬೆನ್ನಲ್ಲೆ, ಅದನ್ನು ಗಮನಿಸಿದ ಲೋಕೋ ಪೈಲೆಟ್ ತಕ್ಷಣ ರೈಲನ್ನು ನಿಲ್ಲಿಸಿದರು.

ಸುಮಾರು ಮುಕ್ಕಾಲು ಗಂಟೆಯ ಕಾರ್ಯಾಚರಣೆ ನಡೆಸಿ ರೈಲ್ವೆ ಸಿಬ್ಬಂದಿಗಳು ಲಿಂಕ್ ತಪ್ಪಿದ್ದ ಬೋಗಿಗಳನ್ನು ಸೇರಿಸಿದರು. ಅಂತಿಮವಾಗಿ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳಸಿತು.