ಶಿವಮೊಗ್ಗ : ಇಲ್ಲಿನ ಕಸ್ತೂರಬಾ ಬಾಲಿಕಾ ಪ.ಪೂ.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಬಸವರಾಜು, ಭೌತಶಾಸ್ತ್ರ ಉಪನ್ಯಾಸಕರಾಗಿರುವ ಮೃತ್ಯುಂಜಯ ಟಿ.ಹಿರೇಮಠ ಮತ್ತು ಗಣಿತಶಾಸ್ತ್ರ ಉಪನ್ಯಾಸಕರಾಗಿರುವ ಸುಧೀರ್ ಎಚ್.ಎಸ್.ಅವರ ವಿರುದ್ಧ

ಪರಸ್ಪರ ಸಹಕಾರದ ದುರ್ನಡತೆಗೆ ಸಂಬಂಧಿಸಿದಂತೆ ಶಿಸ್ತು ಪ್ರಾಧಿಕಾರಿಯಾದ ಎನ್.ಇ.ಎಸ್.ಆಡಳಿತ ಮಂಡಳಿ ವಿಧಿಸಿದ ದಂಡನೆಯನ್ನು ಶಾಲಾ ಶಿಕ್ಷಣ ಇಲಾಖೆ (ಪ.ಪೂ.)ಯ ನಿರ್ದೇಶಕರು ಅನುಮೋದನೆ ನೀಡಿದ್ದಾರೆ.

ಸದರಿ ಮೂವರ ದುರ್ನಡತೆ ಬಗ್ಗೆ ವಿಚಾರಣೆ ನಡೆಸಲು ಇಲಾಖೆಯು ಯುದ್ಯೋಗ ಮತ್ತು ತರಬೇತಿ ಇಲಾಖೆಯ ನಿವೃತ್ತ ಅಧೀಕ್ಷಕ ವೆಂಕಟೇಶ್ ರಾವ್, ಎನ್.ಇ.ಎಸ್.ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಇವರನ್ನೊಳಗೊಂಡ ವಿಚಾರಣಾ ಸಮಿತಯನ್ನು ರಚಿಸಿತ್ತು. ಸಮತಿ ವಿಚಾರಣೆ ನಡೆಸಿ ಆಡಳಿತ ಮಂಡಳಿಗೆ ವಿಚಾರಣಾ ವರದಿಯನ್ನು ಸಲ್ಲಿಸಿತ್ತು. ಸದರಿ ವರದಿಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ದಂಡನೆಯನ್ನು ವಿಧಿಸಿದೆ.

ಟಿ.ಬಸವರಾಜು ಅವರಿಗೆ ಕಡ್ಡಾಯ ನಿವೃತ್ತಿ ದಂಡನೆ, ಮೃತ್ಯುಂಜಯ ಹಿರೇಮಠ ಅವರಿಗೆ 3 ವೇತನ ಬಡ್ತಿಗಳನ್ನು ತಡೆಹಿಡಿಯುವ ದಂಡನೆ, ಮತ್ತು ಸುಧೀರ್ ಎಚ್.ಎಸ್.ಅವರಿಗೆ 2 ವೇತನ ಬಡ್ತಿಗಳನ್ನು ತಡೆ ಹಿಡಿಯುವ ದಂಡನೆ ವಿಧಿಸಲಾಗಿದೆ. ಈ ದಂಡನೆಗಳಿಗೆ ಇಲಾಖೆ ಅನುಮೋದನೆ ನೀಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಜೂ.30ರಂದು ಹೊರಡಿಸಿದ ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ.