ಶಿವಮೊಗ್ಗ: ಕೇಂದ್ರ ಲೋಕಸೇವಾ ಆಯೋಗದ 2024ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗದ ಸಮನ್ವಯ ಟ್ರಸ್ಟ್ ನಡೆಸುತ್ತಿರುವ ಕೆ.ಎ.ದಯಾನಂದ್ ಐಎಎಸ್ ಉಚಿತ ವಾಚನಾಲಯದಲ್ಲಿ ಅಧ್ಯಯನ ನಡೆಸಿದ ತರಬೇತಿ ವಿದ್ಯಾರ್ಥಿಯು ಯುಪಿಎಸ್ಸಿ ರ್ಯಾಂಕ್ ಗಳಿಸಿದ್ದಾರೆ.
ದಯಾನಂದ ಸಾಗರ್ ಅವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 615ನೇ ರ್ಯಾಂಕ್ ಗಳಿಸಿದ್ದಾರೆ. ದಯಾನಂದ್ ಸಾಗರ್ ಅವರು

ಪ್ರಸ್ತುತ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಜತೆಯಲ್ಲಿ ಕೆ.ಎ.ದಯಾನಂದ ಉಚಿತ ವಾಚನಾಲಯದಲ್ಲಿ ಅಧ್ಯಯನ ನಡೆಸುವ ಮೂಲಕ ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದರು.
ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರು ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅನೇಕ ಮಾದರಿ

ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಕೆ.ಎ.ದಯಾನಂದ ಅವರು ರಾಜ್ಯಾದ್ಯಂತ ಪ್ರಸಿದ್ಧಿಯಾಗಿದ್ದಾರೆ. ಸಮನ್ವಯ ಟ್ರಸ್ಟ್ ಕೆ.ಎ.ದಯಾನಂದ ಅವರ ಹೆಸರಿನಲ್ಲಿ 2023-24ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಯುವಜನರಿಗೆ ಅನುಕೂಲವಾಗಲು ಉಚಿತ ವಾಚನಾಲಯ ಆರಂಭಿಸಿತ್ತು.

ಸಮನ್ವಯ ಟ್ರಸ್ಟ್ ವತಿಯಿಂದ ಪ್ರಾರಂಭವಾಗಿರುವ ಕೆ.ಎ.ದಯಾನಂದ್ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಉಚಿತ ವಾಚನಾಲಯದಲ್ಲಿ ದಯಾನಂದ ಸಾಗರ್ ಅವರು ಅಧ್ಯಯನ ನಡೆಸಿದ್ದರು. ಸಾವಿರಾರು ಪುಸ್ತಕಗಳು ಉಚಿತ ವಾಚನಾಲಯದಲ್ಲಿ ಲಭ್ಯವಿದೆ. ಡಿಜಿಟಲ್ ಲೈಬ್ರರಿ ಸೌಲಭ್ಯ ಸಹ ಇದೆ. ಇದರ ಸದುಪಯೋಗ ಪಡಿಸಿಕೊಂಡ ದಯಾನಂದ ಸಾಗರ ಅವರು 615ನೇ ರ್ಯಾಂಕ್ ಗಳಿಸಿದ್ದಾರೆ.
ಯುಪಿಎಸ್ಸಿ ಸಾಧಕ ವಿದ್ಯಾರ್ಥಿಗೆ ಸಮನ್ವಯ ಟ್ರಸ್ಟ್ ತಂಡ ಹಾಗೂ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಅಭಿನಂದನೆ ಸಲ್ಲಿಸಿದ್ದಾರೆ. ಉಚಿತ ವಾಚನಾಲಯದ ಸದುಪಯೋಗ ಪಡೆಯಲು ಇಚ್ಛಿಸುವ ಆಸಕ್ತರು ಮೊ.ಸಂ. 9945387650 ಗೆ ಸಂಪರ್ಕಿಸಬಹುದಾಗಿದೆ.