
ಹೊಸನಗರ; ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಜಾಗ ಆಟದ ಮೈದಾನವೇ ಹೊರತು, ಈದ್ಗಾ ಮೈದಾನವಲ್ಲ. ನಾನು ನನ್ನ ಕಾಲೇಜು ದಿನಗಳಿಂದ ಇದನ್ನು ಬಲ್ಲೆ. ಅಂದು ಅಲ್ಲಿ ಪ್ರಾರ್ಥನಾ ಗೋಡೆಯೇ ಇರಲಿಲ್ಲ. ಇತ್ತೀಚೆಗೆ ಇದು ವಕ್ಫ್ಗೆ ಸೇರಿದೆ ಎಂಬುದಾಗಿ ಸುದ್ದಿ ಹರಿದಾಡಿತ್ತು. ಆದರೆ, ಜಾಗ ವಕ್ಫ್ಗೆ ಸೇರಬೇಕಾದರೆ ಯಾರು ದಾನ ನೀಡಿದ್ದು ಎಂಬ ಪ್ರಶ್ನೆ ಮೊದಲು ಉದ್ಬವಿಸುತ್ತದೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಹಿಂದೆ ೧೯೯೫ ಹಾಗು ೨೦೧೩ರಲ್ಲಿ ವಕ್ಫ್ ಕಾಯ್ದೆಗೆ ಬಲ ಕೊಟ್ಟಿದ್ದೆ ಅಂದಿನ ಆಡಳಿತರೂಡ ಕಾಂಗ್ರೆಸ್ ಸರ್ಕಾರ. ವಕ್ಫ್ ಹೆಸರಿನಲ್ಲಿ ಮುಸ್ಲಿಂಮರಿಗೆ ಮನಸೋಚ್ಛೆ ಸರ್ಕಾರದ ಭೂಮಿ ಕಬಳಿಸಲು ಕಾಯ್ದೆ ನೆರವಾಯ್ತು. ಇತ್ತೀಚೆಗೆ ಲೋಕಸಭಾ ಭವನ ಸಹ ವಕ್ಫ್ ಸಮಿತಿಗೆ ಸೇರಿದ್ದು ಎಂಬ ಮಾತುಗಳು ಕೇಳಿ ಬಂದಿತ್ತು. ಅಂತಯೇ ಶಿವಮೊಗ್ಗ ಈದ್ಗಾ ಮೈದಾನ ವಿಷಯಕ್ಕೆ ಸಂಬಂಧಿಸಿದಂತೆ, ಇಸ್ಲಾಂ ಧರ್ಮದಲ್ಲಿ ನಂಬಿಕೆ ಇರುವಂತ ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾರೊಬ್ಬರು ತಮ್ಮ ಸ್ವಂತ ಜಾಗವನ್ನು ವಕ್ಫ್ಗೆ ದಾನ ನೀಡಿರಬೇಕು. ಈ ಕುರಿತಂತೆ ಸೂಕ್ತ ದಾಖಲೆ ಪರಿಶೀಲನೆ ಅಗತ್ಯವಿದೆ. ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಂಮರ ತುಷ್ಟಿಕರಣದಲ್ಲಿ ತೊಡಗಿದೆ.

ವಕ್ಫ್ ಹೆಸರಿನಲ್ಲಿ ಸಿಕ್ಕ ಸಿಕ್ಕ ಕಡೆ ಭೂ ಕಬಳಿಕೆ ಮಾಡಿ ಅಕ್ರಮ ಬೇಲಿ ನಿರ್ಮಿಸಲು ಬಿಜೆಪಿ ಪಕ್ಷ ಎಂದಿಗೂ ಬಿಡುವುದಿಲ್ಲ. ಅಕ್ರಮ ಜಾಗ ಕಬಳಿಕೆ ಕ್ರಮವನ್ನು ಖಂಡಿಸಿ ಮುಂದೆ ಸಾರ್ವಜನಿಕ ಜಾಗೃತಿಗಾಗಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಇತ್ತೀಚೆಗೆ ಮಡಿಕೇರಿ ಭಾಗದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ವಿನಯ್ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಸಿಕ್ಕ ಡೆತ್ ನೋಟ್ನಲ್ಲಿ ಉಲ್ಲೇಖಿಸಿರುವಂತೆ, ನನ್ನ ಸಾವಿಗೆ ಕಾಂಗ್ರೆಸ್ ಪಕ್ಷದ ಇಬ್ಬರೂ ಶಾಸಕರೇ ನೇರ ಹೊಣೆ ಎಂಬ ದೂರಿನ ಹಿನ್ನಲೆ ತತಕ್ಷಣ ಅಂತವರ ವಿರುದ್ದ ಸೂಕ್ತ ತನಿಖೆ ಕೈಗೊಂಡು, ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಸರಣಿ ಆತ್ಮಹತ್ಯೆ ಶರಣಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಸಹಾಯಕರ ಕಿರುಕುಳದಿಂದಾಗಿ ಬೆಳಗಾವಿಯ ತಾಲೂಕು ಕಚೇರಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾದುದು ಇದಕ್ಕೆ ಜ್ವಲಂತ ಉದಾಹರಣೆ. ಸರ್ಕಾರಿ ನೌಕಕರಿಗೆ ಕಿರುಕುಳ ಕೊಟ್ಟು ಸಾಯಿಸುವ ಪ್ರವೃತ್ತಿ ಇಂದಿನ ರಾಜ್ಯ ಸರ್ಕಾರದ ಆಡಳಿತ ಅವಧಿಯಲ್ಲಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದವರಿಗೆ ರೌಡಿಗಳ ಅವಶ್ಯಕತೆಯೇ ಇಲ್ಲ. ಸ್ವತಹ: ಅವರೇ ರೌಡಿಗಳಾಗಿದ್ದಾರೆ. ರಾಜ್ಯದಲ್ಲಿ ಬೆಲೆ ಏರಿಕೆ, ಬಾಣಂತಿಯರ ಸಾವು, ಹಾದಿ ಬೀದಿಗಳಲ್ಲಿ ಕೊಲೆ ನಿಂತಿಲ್ಲ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ ಎಂಬುದೇ ಜನತೆ ಮರೆತಂತಿದೆ.

ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ನಿಷ್ಟಾವಂತ ಕಾರ್ಯಕರ್ತನ ಸಾವಿಗೆ ಬೆಲೆ ಸಿಗಬೇಕಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು, ತಪ್ಪಿತಸ್ತರನ್ನು ಬಂಧಿಸಿ ಜೈಲಿಗಟ್ಟಬೇಕು. ಈ ಕುರಿತು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಾಲೂಕು ಬಿಜೆಪಿ ಪ್ರಮೂಖ ಎನ್.ಆರ್. ದೇವಾನಂದ್, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷ ಗಣಪತಿ ಬೆಳಗೋಡು, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮೊದಲಾವರು ಉಪಸ್ಥಿತರಿದ್ದರು.