ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆಗೀಡಾದ ಕೈದಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ.
ಶಿವಮೊಗ್ಗದ ರಾಜೀವಗಾಂಧಿ ಬಡಾವಣೆ ನಿವಾಸಿ ಪರಶುರಾಮ ಅಲಿಯಾಸ್ ಚಿಂಗಾರಿಗೆ ಹೊಟ್ಟೆನೋವಿನ ಕಾರಣಕ್ಕೆ ಮಾ.28 ರಂದು ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಅದರೆ ಹೊಟ್ಟೆನೋವು ಜಾಸ್ತಿ ಆದ ಕಾರಣ ಶಿವಮೊಗ್ದದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆತರಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಪರಶುರಾಮ ಕಲ್ಲು ನುಂಗಿರಬಹುದು ಎಂದು ಶಂಕಿಸಿದ್ದಾರೆ.
ಏ. 1 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿಗೆ ಕಳುಹಿಸಲಾಗಿದೆ.
ಏ.3 ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಯಿಂದದ ಚಿಕಿತ್ಸೆ ಕೊಡಿಸಿ ಅವರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಲ್ಲಿ ಏಪ್ರಿಲ್ 25 ರಂದು ಶಸ್ತ್ರ ಚಿಕಿತ್ಸೆ ನಡೆಸಿ ಕೈದಿಯ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರ ತೆಗೆಯಲಾಗಿದೆ.
ಜೈಲಿನಲ್ಲಿ ನಿಷೇಧಿತ ವಸ್ತು ಮೊಬೈಲ್ ಫೋನ್ ಕೈದಿಯ ಹೊಟ್ಟೆಯಲ್ಲಿ ದೊರೆತಿರುವುದರಿಂದ ಆತನ ವಿರುದ್ಧ ಶಿವಮೊಗ್ಗ ಕಾರಾಗೃಹದ ಅಧೀಕ್ಷಕರು ಇಲ್ಲಿನ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.