ಶಿವಮೊಗ್ಗ,ಏ.16: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದು, ಕ್ಷೇತ್ರದ ಎಲ್ಲಾ ತಾಲ್ಲೂಕುಗಳಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇಂದು ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದು, ಎಲ್ಲಾ ವಕೀಲರು ನಿಮ್ಮ ತೀರ್ಮಾನ ಸರಿಯಿದೆ. ನಿಮಗೆ ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಕೀಲರು, ಇಂಜಿನಿಯರ್ಗಳು, ಗಣ್ಯ ವ್ಯಕ್ತಿಗಳು, ರೈತರು, ಯುವಕರು, ಮಹಿಳೆಯರು, ವೈದ್ಯರು ಎಲ್ಲರೂ ಕೂಡ ಸ್ವಯಂ ಪ್ರೇರಿತರಾಗಿ ನನ್ನ ಬೆಂಬಲಕ್ಕೆ ನಿಂತಿರುವುದು ನನಗೆ ಸಂತೋಷ ತಂದಿದೆ. ಉತ್ಸಾಹ ಹೆಚ್ಚಿಸಿದೆ ಎಂದರು.
ವಿಜಯೇಂದ್ರ ಅವರು, ನನ್ನ ಬಗ್ಗೆ ಪುಕ್ಸಟ್ಟೆ ಪ್ರಚಾರ ಮಾಡುವುದು ಬಿಟ್ಟು ಈಶ್ವರಪ್ಪನವರು ಕ್ಷೇತ್ರದಲ್ಲಿ ಮಾಡಿದ ಸಾಧನೆ ಏನು ಎಂದು ಕೇಳಿದ್ದಾರೆ. ಅವರು ಮೊದಲು ಅವರು ಏನು ಮಾಡಿದ್ದಾರೆ ಎಂದು ಹೇಳಲಿ, ಅಪ್ಪನ ಸಾಧನೆಯಿಂದ ರಾಜ್ಯಾಧ್ಯಕ್ಷರಾಗಿದ್ದಾರೆ. ನನಗೆ ಪ್ರಶ್ನೆ ಮಾಡಲು ಅವರು ಯಾರು? ಅವರಿಗೆ ಏನು ಯೋಗ್ಯತೆ ಇದೆ ? ಅವನು ನನ್ನ ಮುಂದೆ ಬಚ್ಚಾ, ನಾನು 40 ವರ್ಷ ತಪಸ್ಸು ಮಾಡಿ ಬಿಜೆಪಿ ಕಟ್ಟಿದ್ದೇನೆ. ಅಪ್ಪನ ಶ್ರಮದಿಂದ ರಾಜ್ಯಾಧ್ಯಕ್ಷನಾದ ವಿಜಯೇಂದ್ರನಿಗೆ ಯಾವ ಯೋಗ್ಯತೆಯೂ ಇಲ್ಲ, ಶಿಕಾರಿಪುರದಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ತಿಣುಕಿ ತಿಣುಕಿ ಗೆದ್ದಿದ್ದಾರೆ. ನಿಮ್ಮ ಟೀಕೆ ಮುಂದುವರೆದಲ್ಲಿ, ನಾನು ಬೇರೆ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಹುಷಾರು ಎಂದು ಎಚ್ಚರಿಸಿದರು.
ನನ್ನ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ನಾನು ಬಿಜೆಪಿಯಲ್ಲಿಲ್ಲ, ಪಕ್ಷೇತರನಾಗಿ ನಿಂತಿದ್ದೇನೆ ತಾಕತ್ತಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಿ . ಕುಟುಂಬ ರಾಜಕಾರಣದ ವಿರುದ್ಧ ಪ್ರಧಾನಿ ಮೋದಿಯವರು ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, ಬಿ.ಎಸ್.ವೈ. ಕುಟುಂಬ ಬಿಜೆಪಿಯನ್ನು ಅಪ್ಪ ಮಕ್ಕಳ ಪಕ್ಷ ಮಾಡಿದೆ. ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ರಕ್ತ ಸುರಿಸಿ ಕಟ್ಟಿದ ಪಕ್ಷವಿದು. ಶಿಕಾರಿಪುರಕ್ಕೆ ಹೋಗಿ, ಒಮ್ಮೆ ನೋಡಿಕೊಂಡು ಬನ್ನಿ ನಿಮ್ಮ ಬಗ್ಗೆ ಮತದಾರ ಎಷ್ಟು ಆಕ್ರೋಶ ಹೊಂದಿದ್ದಾನೆ ಎಂದು ಗೊತ್ತಾಗುತ್ತದೆ ಎಂದು ಕುಟುಕಿದ ಅವರು ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಶ್ವರಪ್ಪನ ತಾಕತ್ತು ಏನು ಎಂದು ಗೊತ್ತಾಗಲಿದೆ ಎಂದರು.