ಶಿವಮೊಗ್ಗ: ರಾಜ್ಯದ ೧೩೦ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ ತೀವ್ರತರ ಬರಗಾಲವಿದೆ. ಸುಮಾರು ಒಂದು ತಿಂಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಬೆಳೆ ಸಂಪೂರ್ಣ ನಾಶವಾಗಿದೆ. ಈಗ ಮಳೆ ಬಂದರೂ ಬೆಳೆ ಚೇತರಿಸಿಕೊಳ್ಳುವುದಿಲ್ಲ.

ಕಂದಾಯ ಸಚಿವರೇ ೧೨೦ ತಾಲೂಕುಗಳಲ್ಲಿ ಬರಗಾಲದ ಛಾಯೆ ಇದೆ ಎಂದು ಹೇಳಿದ್ದಾರೆ. ಆದ್ದರಿಂದ ಸರ್ಕಾರ ೧೩೦ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಪರಿಹಾರ ರೂಪವಾಗಿ ಎಕರೆಗೆ ೨೫ ಸಾವಿರ ನೀಡಬೇಕು. ಫಸಲ್ ವಿಮಾ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ರೈತರ ಐಪಿ ಸೆಟ್ಗಳಿಗೆ ಹಗಲು ಹೊತ್ತು ಕನಿಷ್ಠ ೧೦ ಗಂಟೆಗಳ ಸಮರ್ಪಕ ವಿದ್ಯುತ್ ನೀಡಬೇಕು. ಐಪಿ ಸೆಟ್ಗಳಿಗೆ ಆಧಾರ್ ಕಾರ್ಡ್ ಜೋಡಣೆಗ ಒತ್ತಾಯಿಸಬಾರದು. ಇದರ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿದೆ. ಆಧಾರ್ ಕಾರ್ಡ್

ಜೋಡಣೆ ಮಾಡಿದರೆ ಮುಂದೆ ಮೊಬೈಲ್ಗಳಿಗೆ ಕರೆನ್ಸಿ ಹಾಕಿಸಿಕೊಂಡು ಉಪಯೋಗಿಸುವ ರೀತಿಯಲ್ಲಿ ಬಳಸಬೇಕಾಗುತ್ತದೆ ಎಂದು ದೂರಿದರು.

ಅ.೨ರಂದು ತೆಂಗು ಬೆಳೆಗಾರರನ್ನು ಬೆಂಬಲಿಸಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಸ್. ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಕೆ. ರಾಘವೇಂದ್ರ, ಪಿ.ಡಿ.ಮಂಜಪ್ಪ ಇದ್ದರು.