ಶಿವಮೊಗ್ಗ: ಅಭಿವೃದ್ಧಿ ಹಿಂದುತ್ವ, ಕಾರ್ಯಕರ್ತರ ಶ್ರಮ ನನ್ನ ಗೆಲುವಿಗೆ ಕಾರಣ ಎಂದು ನೂತನವಾಗಿ ಆಯ್ಕೆಯಾಗಿರುವ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಅವರು ಇಂದು ಗೆಲುವಿನ ಸಂಭ್ರಮವನ್ನು ಕಾರ್ಯಕರ್ತರೊಂದಿಗೆ ಸಿಹಿ ಹಂಚಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಪಕ್ಷ ಟಿಕಟ್ ನೀಡಿತ್ತು. ಗೆಲ್ಲುವ ಮೂಲಕ ಅದನ್ನು ನಾನು ಉಳಿಸಿಕೊಂಡಿದ್ದೇನೆ. ಗೆಲುವಿನ ನಿರೀಕ್ಷೆ ಇತ್ತು. ನನ್ನ ಪ್ರಕಾರ ಸುಮಾರು ೪೦ ಸಾವಿರದ ಅಂತರದ ಗೆಲುವಿನ ನಿರೀಕ್ಷೆ ಇತ್ತು. ಆದರೆ ೧೦ಸಾವಿರ ಕಡಿಮೆಯಾಗಿದೆ ಆದರೂ ತೊಂದರೆ ಇಲ್ಲ. ಗೆಲುವು ಗೆಲುವೇ. ನನ್ನ ಗೆಲುವಿಗೆ ಕಾರ್ಯಕರ್ತರ ಪರಿಶ್ರಮ ಬಹುಮುಖ್ಯ ಕಾರಣ ಎಂದರು.

ಆಯನೂರು ಮಂಜುನಾಥ್ ಅವರ ಕುರಿತು ಪ್ರಶ್ನೆ ಕೇಳುವ ಮೊದಲೇ ಆ ಬಗ್ಗೆ ನಾನು ಏನೂ ಹೇಳಲಾರೆ ಅದು ಅವರವರಿಗೆ ಬಿಟ್ಟದ್ದು ಎಂದ ಅವರು, ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನೋವಿನ ಸಂಗತಿ ಎಂದರು.